(ನವದೆಹಲಿ ವರದಿ): ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಅಭಿನಂದಿಸಿದರು. ಆದರೆ ಪಕ್ಷದ ಸಾಧನೆಯ ಸಂಪೂರ್ಣ ಹೆಗ್ಗಳಿಕೆ ಮೋದಿಗೆ ಸೇರುತ್ತದೆ ಎಂಬ ಮಾತು ಅವರಿಂದ ಬರಲಿಲ್ಲ. ಬಿಜೆಪಿ ಪ್ರಚಂಡ ವಿಜಯಕ್ಕೆ ಮೋದಿ ನಾಯಕತ್ವ ಎಷ್ಟರಮಟ್ಟಿಗೆ ಕೊಡುಗೆ ನೀಡಿದೆ ಎನ್ನುವುದನ್ನು ಮೌಲ್ಯಮಾಪನ ಮಾಡಬೇಕಿದೆ ಎಂದು ಅಡ್ವಾಣಿ ಹೇಳಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಭಾಗಿಯಾದ ಅವರು, ಈ ದೇಶವು ಹಿಂದೆಂದೂ ಇಂಥ ಚುನಾವಣೆ ಕಂಡಿರಲಿಲ್ಲ ಎಂದು ಭಾವುಕರಾಗಿ ನುಡಿದರು. ‘ದುರಾಡಳಿತ, ಭ್ರಷ್ಟಾಚಾರ, ವಂಶಪಾರಂಪರ್ಯ ಆಡಳಿತಕ್ಕೆ ಜನರು ರೋಸಿ ಹೋಗಿದ್ದರು. ಹಾಗಾಗಿಯೇ ಅವರೆಲ್ಲ ಬಿಜೆಪಿಯನ್ನು ಗೆಲ್ಲಿಸಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಯಾವಾಗ ಮೋದಿ ಆಯ್ಕೆಯಾದರೋ ಆವಾಗಿನಿಂದ ಅಡ್ವಾಣಿ ಅವರು ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತ ಬಂದಿದ್ದಾರೆ. 2013ರ ಜೂನ್ಲ್ಲಿ ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಅಡ್ವಾಣಿ ಭಾಗವಹಿಸಿರಲಿಲ್ಲ.