ಮಾಂಡ್ವಿ, ಗುಜರಾತ್ (ಪಿಟಿಐ): ಅಭಿವೃದ್ಧಿಗೆ ಸಂಬಂಧಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಗಳನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, `ಬಡವರ ಅಭಿವೃದ್ಧಿಯನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ' ಎಂದು ಆರೋಪಿಸಿದ್ದಾರೆ.
ಶುಕ್ರವಾರ ಇಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, `ರಾಜ್ಯ ಸರ್ಕಾರವು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಸೋತಿದೆ. ಅಲ್ಲದೇ ಇಲ್ಲಿ ಕಾನೂನು ಹಾಗೂ ಸುವ್ಯಸ್ಥೆ ಕೂಡ ಉತ್ತಮವಾಗಿಲ್ಲ' ಎಂದು ಟೀಕಿಸಿದರು.
`ತಾರತಮ್ಯ ಮಾಡದೇ ಗುಜರಾತ್ ಸೇರಿ ಎಲ್ಲ ರಾಜ್ಯಗಳಿಗೂ ಕೇಂದ್ರವು 1000 ಕೋಟಿ ರೂಪಾಯಿ ಅನುದಾನ ನೀಡಿದೆ. ಆದರೆ ರಾಜ್ಯದಲ್ಲಿ ಈ ಹಣ ಯಾವ ರೀತಿ ಬಳಕೆಯಾಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಇಲ್ಲಿನ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಸ್ವಹಿತಾಸಕ್ತಿಯೇ ಮುಖ್ಯವಾಗಿದೆ' ಎಂದು ಅವರು ದೂಷಿಸಿದರು.
`ಬಿಜೆಪಿ ನೀತಿಗಳಿಂದ ಜನಸಾಮಾನ್ಯರ ಸಂಕಷ್ಟ ಹೆಚ್ಚಿದೆ. ಸರ್ಕಾರ ನಿಮ್ಮ ಸಮಸ್ಯೆ ಆಲಿಸಿದ್ದರೆ ನಿಮಗೆ ಇಂಥ ದುರ್ಗತಿ ಬರುತ್ತಿರಲಿಲ್ಲ' ಎಂದೂ ಅವರು ಹೇಳಿದರು. `ಯುಪಿಎ ಸರ್ಕಾರವು ರೈತರ ಸಾಲ ಮನ್ನಾ ಮಾಡಿದೆ. ನಮ್ಮದು ರೈತ ಪರ ಸರ್ಕಾರ' ಎಂದು ದೂರಿದರು. ಗುಜರಾತ್ನಲ್ಲಿ ಇದೇ 13ರಂದು ಮೊದಲ ಹಂತದ ಮತದಾನ ನಡೆಯಲಿದೆ.