ದಾವಣಗೆರೆ: ಭಕ್ತಿ, ಶ್ರದ್ಧೆಯ ಕೇಂದ್ರವಾಗಬೇಕಿದ್ದ ನಗರದ ದುರ್ಗಾಂಬಿಕಾ ದೇವಸ್ಥಾನ ಹಾಗೂ ಅಲ್ಲಿನ ಜಾತ್ರೆ ಅಮಾನವೀಯ, ರಾಕ್ಷಸೀ ಪ್ರವೃತ್ತಿಯ ಮೌಢ್ಯ ತುಂಬಿದ ತಾಣವಾಗಿ ಮಾರ್ಪಟ್ಟಿತು.
ಜಿಲ್ಲಾಡಳಿತದ ಸೂಚನೆ, ಮಠಾಧೀಶರು, ಗುರುಗಳ ಮನವಿ ಆದೇಶ, ಕಾನೂನು ಕ್ರಮದ ಭೀತಿ ಎಲ್ಲ ಇದ್ದರೂ ಅವೆಲ್ಲವನ್ನೂ ಮೀರಿ ತಾವೇನೋ ಸಾಧನೆ ಮಾಡುತ್ತಿದ್ದೇವೆ ಎಂಬಂತೆ ಕೋಣ ಬಲಿ, ಬೇವಿನ ಉಡು ಗೆಯಂತಹ ಅನಾಗರಿಕ ಆಚರಣೆಗಳನ್ನು ಅಲ್ಲಿನ ಪಟ್ಟಭದ್ರರ ವರ್ಗ ಮುಂದು ವರಿಸಿತು. ಬಲಿ ನಡೆಯಲೇಬೇಕು ಅನ್ನು ತ್ತಿದ್ದವರು ಕೊನೆಗೂ ಬೆಳಗಿನ ಜಾವ ಕೋಣನ ಬಲಿ ಹಾಕಿದರು.
ಬಲಿ ಆಕ್ಷೇಪಿಸಿದ ಜಿಲ್ಲಾಧಿಕಾರಿ ಹಾಗೂ ಪೊಲೀಸರನ್ನೇ ಅವಾಚ್ಯವಾಗಿ ನಿಂದಿಸಲಾಯಿತು. ಇದ್ದಕ್ಕಿದ್ದಂತೆಯೇ ದೊಂಬಿಯೆಬ್ಬಿಸಿದರು. ಮಾಧ್ಯಮ ಗಳನ್ನು ಗುರಿಯಾಗಿಸಿಕೊಂಡು ದಾಳಿಮಾಡಿದರು.
`ಪ್ರಾಣಿ ಬಲಿ ನಿಷೇಧಿಸಲೇಬೇಕು. ಇದಕ್ಕೂ ಮೀರಿ ಬಲಿ ನಡೆದರೆ ಅದು ಗುರುದ್ರೋಹ ಮಾಡಿದಂತೆ~ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಜಾತ್ರೆಗೂ ಮುನ್ನ ನಡೆದ ಜಾಗೃತಿ ಸಭೆಯಲ್ಲಿ ನೋವಿನಿಂದ ನುಡಿದಿದ್ದರು. ಅವರ ಮಾತಿಗೂ ಬೆಲೆ ಸಿಗಲಿಲ್ಲ. ಎಲ್ಲವನ್ನೂ ಚರ್ಚಿಸಿ ಕೊನೆಗೂ ಬಲಿ ನಡೆದರೆ ಪೊಲೀಸರ ತಲೆಗೆ ಕಟ್ಟಲಾಗುತ್ತದೆ. ಬನ್ನಿ ಗುರುಗಳೇ ಬಲಿ ನಡೆಯುವ ರಾತ್ರಿ ನೀವೂ ನಮ್ಮಂದಿಗೆ ಇರಿ ಎಂದು ಡಿವೈಎಸ್ಪಿ ಚಂದ್ರಪ್ಪ ಪೂರ್ವಭಾವಿ ಸಭೆಗಳಲ್ಲಿ ಗುರುಗಳನ್ನು, ಸಂಘಟನೆಗಳ ಮುಖಂಡರನ್ನು ಕೋರಿದ್ದರು. ಆದರೆ, ಯಾರೂ ಜಾತ್ರೆಯ ಸ್ಥಳಕ್ಕೆ ಬರಲಿಲ್ಲ.
ಎಲ್ಲಿಯೋ ನಡೆದ ಬಲಿಗೆ ನಾವು ಹೊಣೆಯಲ್ಲ. ಬಲಿ ನಿಷೇಧಿಸಲು ನಾವು ನಿರ್ಧರಿಸಿದ್ದೇವೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ದೇವಸ್ಥಾನದ ಆಡಳಿತ ವರ್ಗ ಹೇಳಿದೆ. ಹಾಗಿದ್ದರೂ ಬಲಿ ನಡೆದಿರುವುದು. ವಿಕೃತಿ ಪ್ರದರ್ಶಿಸಿರುವುದು ತಮಗೆನೋವು ತಂದಿದೆ ಎಂದು ಕೆಲ ಭಕ್ತರು ಬೇಸರ ವ್ಯಕ್ತಪಡಿಸಿದರು.