ಮಂಡ್ಯ: ‘ದೇವರ ಅಸ್ತಿತ್ವವನ್ನು ನಿರಾಕರಿಸಿ, ಸಂಪ್ರದಾಯ ಮತ್ತು ಮೌಢ್ಯಗಳ ವಿರುದ್ಧ ಧ್ವನಿ ಎತ್ತಿದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಮಹಾನ್ ಚೇತನ’ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ರಾಜ್ಯ ಸಂಯೋಜಕ ಎನ್.ಮಹೇಶ್ ಬಣ್ಣಿಸಿದರು.
ನಗರದ ಗಾಂಧಿ ಭವನದಲ್ಲಿ ಬುಧವಾರ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವು ಏರ್ಪಡಿಸಿದ್ದ ಪೆರಿಯಾರ್ ರಾಮಸ್ವಾಮಿ ಅವರ 135ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆ, ಅಸಮಾನತೆ, ಮೂಢ ನಂಬಿಕೆಗಳು, ಸಂಪ್ರದಾಯಗಳ ವಿರುದ್ಧ ದೊಡ್ಡ ಮಟ್ಟದ ಚಳವಳಿಯನ್ನು ಸಂಘಟಿಸಿದ ಪೆರಿಯಾರ್ ಅವರು, ವೈಚಾರಿಕ ಚಿಂತನೆಗಳನ್ನು ಬಿತ್ತಲು ಸಾಕಷ್ಟು ಶ್ರಮವಹಿಸಿದ್ದರು ಎಂದರು.
ದೇವರ ಅಸ್ತಿತ್ವ ಮತ್ತು ಮೌಢ್ಯಗಳ ವಿರುದ್ಧ ಸ್ವಾಭಿಮಾನ ಚಳವಳಿ ಕಟ್ಟಿದಾಗ ಎದುರಾದ ಪ್ರತಿರೋಧಗಳನ್ನೂ ಅಷ್ಟೇ ಸಮರ್ಥವಾಗಿ ಧಕ್ಕಿಸಿಕೊಂಡರು ಎಂದು ಗುಣಗಾನ ಮಾಡಿದರು.
ಸಾಮಾಜಿಕ ಅನಿಷ್ಟಗಳ ವಿಮೋಚನೆಗಾಗಿ ಹೋರಾಡಿದ ಪೆರಿಯಾರ್ ಅವರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಅದು, ಬಾಯಿಯಿಂದ ಬಾಯಿಗೆ ತಲುಪಿಸುವ ಜನಪದ ಸಾಹಿತ್ಯ ಮಾದರಿಯಲ್ಲಿ ಇದ್ದರೇ ಒಳ್ಳೆಯದು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಿ.ರಾಜಯ್ಯ, ನಗರಸಭೆ ಸದಸ್ಯ ಸುಕುಮಾರ್, ಪತ್ರಕರ್ತ ದೇವರಾಜ ಕೊಪ್ಪ, ಬೌದ್ಧ ಮಹಾಸಭಾ ಸಂಚಾಲಕ ಎಂ.ಸಿ.ಶಿವರಾಜು ಇತರರು ಇದ್ದರು.