ಬೆಂಗಳೂರು: ‘ಸಾಮಾಜಿಕ ಹಾಗೂ ಕೌಟುಂಬಿಕ ವಾತಾವರಣದ ಓರೆ–ಕೋರೆಗಳೇ ವ್ಯಕ್ತಿಯನ್ನು ಅತ್ಯಾಚಾರಿಯನ್ನಾಗಿ ಮಾಡುತ್ತವೆ’ ಎಂದು ಸ್ತ್ರೀವಾದಿ ಚಿಂತಕಿ ಮತ್ತು ಹೋರಾಟಗಾರ್ತಿ ಕಮಲಾ ಬಾಸಿನ್ ಹೇಳಿದರು.
ಸ್ವರಾಜ್ ಸಂಘಟನೆ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ನೆಲತಾಯಿ’ ಪ್ರಶಸ್ತಿ ಪುರಸ್ಕಾರ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಜನ್ಮತಃ ಯಾರೂ ಅತ್ಯಾಚಾರಿಗಳಲ್ಲ. ವ್ಯಕ್ತಿ ಸಮಾಜಕ್ಕೆ ತೆರೆದುಕೊಳ್ಳುವ ಹಂತದ ಲೋಪಗಳು ದುಷ್ಟರು ಹಾಗೂ ಅತ್ಯಾಚಾರಿಗಳನ್ನು ಸೃಷ್ಟಿಸುತ್ತದೆ. ವಿಧವೆಯರು, ಪುರುಷ ಪ್ರಧಾನ ವ್ಯವಸ್ಥೆಯ ಮೌಢ್ಯಗಳನ್ನು ಮೀರಿ ಬದುಕನ್ನು ಕಟ್ಟಿಕೊಳ್ಳಬೇಕು’ ಎಂದು ನುಡಿದರು.
ಲೇಖಕ ಬಂಜಗೆರೆ ಜಯಪ್ರಕಾಶ ‘ಮೌನ ಮಾತಾದಾಗ’ ಪುಸ್ತಕವನ್ನು ಬಿಡುಗಡೆ ಮಾಡಿ, ‘ಮೌನ ಮಾತಾದಾಗ’ ಕೃತಿ ಕೊರಗ ಸಮುದಾಯದ ಜೀವನ ಮೌಲ್ಯಗಳನ್ನು ಕಟ್ಟಿಕೊಡುತ್ತದೆ. ಬದುಕಿನ ಅನುಭವಗಳು ಭಿನ್ನವಾದಾಗ ಮಂಡಿಸುವ ಕ್ರಮವೂ ಭಿನ್ನವಾಗುತ್ತದೆ. ತಳ ಮಟ್ಟದ ಅಕ್ಷರಸ್ಥರು ರೂಪಿಸಿರುವ ಈ ಕೃತಿಯಲ್ಲಿ ಮುಖ್ಯವಾಹಿನಿಯ ಸಂಸ್ಕೃತಿಗಳು ಕಲಿಯಬೇಕಾದದ್ದು ಬಹಳಷ್ಟಿದೆ’ ಎಂದರು.
‘ನೂರಾರು ವರ್ಷಗಳಿಂದ ಮೌನವಾಗಿದ್ದ ಬುಡಕಟ್ಟು ಸಮುದಾಯವು ತನ್ನ ಬದುಕನ್ನು ತಾನೇ ಅಭಿವ್ಯಕ್ತಿಸುವ ಪ್ರಯತ್ನವನ್ನು ವಿಮರ್ಶೆಯ ಯಾವ ಪಟ್ಟುಗಳಿಂದಲೂ ಅಳೆಯುವ ಅವಶ್ಯಕತೆಯಿಲ್ಲ’ ಎಂದರು.
ಸ್ತ್ರೀವಾದಿ ಚಿಂತಕಿ ಡಾ.ಗಾಯತ್ರಿ ನಾವಡ, ‘ಅಪ್ಪೆ’ ಕೃತಿಯನ್ನು ಬಿಡುಗಡೆ ಮಾಡಿ, ‘ಈ ಕೃತಿಗಳು ಪರ್ಯಾಯ ಸಂಸ್ಕೃತಿಯ ಬೀಜಗಳನ್ನು ಒಳಗೊಂಡಿವೆ. ಪರ್ಯಾಯ ಸಂಸ್ಕೃತಿಯೆಂದರೆ ಮುಖ್ಯವಾಹಿನಿಯ ಸಂಸ್ಕೃತಿಗೆ ವಿರುದ್ಧವಾದುದಲ್ಲ. ಮಹಿಳೆಯರನ್ನು ಆರ್ಥಿಕ ಸಬಲೀಕರಣದಿಂದ ಬಿಡಿಸಿ ಸಾಂಸ್ಕೃತಿಕ ಸಬಲೀಕರಣದೆಡೆಗೆ ಕೊಂಡೊಯ್ಯಬೇಕಾಗಿದೆ’ ಎಂಬ ಹೊಳಹು ಈ ಕೃತಿಗಳಲ್ಲಿವೆ’ ಎಂದರು.
ಆಕ್ಷನ್ ಏಡ್ ಸಂಸ್ಥೆಯ ಸದಸ್ಯ ಡಾ. ಕ್ಷಿತಿಜ್ ಅರಸ್ ‘ಕಾಡಿನ ನಾಡಿ ಮಿಡಿದಾವು’ ಕೃತಿ ಬಿಡುಗಡೆ ಮಾಡಿದರು.
ವಿಧವಾ ಪದ್ಧತಿಯ ಆಚರಣೆಗಳ ವಿರುದ್ಧ ದನಿ ಎತ್ತಿದ ಜ್ಯೋತಿ, ಮಹಾದೇವಮ್ಮ, ಸಾಯಿರಾ ದರ್ಗಾ, ಮಾಸಾಬಿ ಮತ್ತು ಕೊರಗ ಸಮುದಾಯದ ರಾಜಮ್ಮ, ಯಾದಮ್ಮ ಅವರಿಗೆ ‘ನೆಲತಾಯಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.