ಬೆಂಗಳೂರು: `ಪ್ರಾಧ್ಯಾಪಕರು ಪಠ್ಯಪುಸ್ತಕದ ಬೋಧನೆ ಮಾತ್ರ ಮಾಡದೆ, ತಮಗೆ ಬರುವ ಆದಾಯದಲ್ಲಿ ಅಲ್ಪ ಪ್ರಮಾಣವನ್ನು ತಾವು ಪ್ರತಿನಿಧಿಸುವ ಶೈಕ್ಷಣಿಕ ಸಂಸ್ಥೆಗೆ ನೀಡಿ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು~ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.
ಆಚಾರ್ಯ ಪಾಠಶಾಲಾ ಶಿಕ್ಷಣ ಟ್ರಸ್ಟ್ ಗುರುವಾರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೊ.ಎನ್.ಅನಂತಾಚಾರ್ಯರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ `ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು~ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು.
`ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿನ ಬಜೆಟ್ ಪಾಕಿಸ್ತಾನದ ಬಜೆಟ್ಗಿಂತ ಜಾಸ್ತಿಯಿದೆ. ಒಂದು ದೇಶದ ಬಜೆಟ್ಗಿಂತ ಶೈಕ್ಷಣಿಕ ಸಂಸ್ಥೆಯ ಬಜೆಟ್ ಹೆಚ್ಚಿರುವುದು ಅಲ್ಲಿನ ಹಿರಿಯ ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರ ಧನಸಹಾಯವೇ ಕಾರಣವಾಗಿದೆ. ಹೀಗಾಗಿ ತಮ್ಮ ಶೈಕ್ಷಣಿಕ ಸಂಸ್ಥೆಗೆ ಹಿರಿಯ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಧನ ಸಹಾಯ ಮಾಡಬೇಕು~ ಎಂದು ಕರೆ ನೀಡಿದರು.
`ತಂತ್ರಜ್ಞಾನ ಬೆಳೆದಂತೆ ಅಧ್ಯಾಪಕರು ಮಕ್ಕಳಿಂದ ಕಲಿಯುವುದು ಸಾಕಷ್ಟಿದೆ. ಇಂಗ್ಲಿಷ್ ಸಂವಹನ ಮತ್ತು ಕೌಶಲ ಇವುಗಳನ್ನು ಕಲಿಯುವುದು ಶಿಕ್ಷಣವಲ್ಲ. ಮಾನವೀಯ ಮೌಲ್ಯಗಳನ್ನು ನಿಜವಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದೇ ಶಿಕ್ಷಣವಾಗಿದೆ~ ಎಂದು ಪ್ರತಿಪಾದಿಸಿದರು.
`ಯಾವುದೇ ವೃತ್ತಿಯಲ್ಲಿದ್ದರೂ ಆ ವೃತ್ತಿಯನ್ನು ಪ್ರೀತಿಸಿ. ಸತತ ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳಿಂದ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರುತ್ತಾನೆ~ ಎಂದರು.
`ಅಣ್ಣಾ ಹಜಾರೆಯವರ ಹೋರಾಟ ಕೇವಲ ಕಪ್ಪು ಹಣದ ವಿರುದ್ಧವಾಗಿರಲಿಲ್ಲ. ಮಾನಸಿಕ ಭ್ರಷ್ಟತನದ ವಿರುದ್ಧದ ಹೋರಾಟವೂ ಆಗಿತ್ತು~ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಅಧ್ಯಕ್ಷ ಟಿ.ವಿ.ಮಾರುತಿ ಮತ್ತು ಉಪಾಧ್ಯಕ್ಷ ಕೆ.ಮೋಹನ್ದೇವ್ ಆಳ್ವ ಇದ್ದರು.