ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಸಲುವಾಗಿ ಕೆಪಿಎಸ್ಸಿ ನಡೆಸಿದ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಇನ್ನೂ ಹಲವು ಎಡವಟ್ಟುಗಳಾಗಿವೆ ಎಂಬುದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ಕನ್ನಡ ಮಾಧ್ಯಮದ ಮೌಲ್ಯಮಾಪಕರು ಇಂಗ್ಲಿಷ್ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಹಾಗೂ ಇಂಗ್ಲಿಷ್ ಮಾಧ್ಯಮದ ಮೌಲ್ಯಮಾಪಕರು ಕನ್ನಡ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದಾರೆ.
ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಗಳನ್ನು ನೀಡುವಾಗ ಮಾಧ್ಯಮದ ಬಗ್ಗೆ ಕೆಪಿಎಸ್ಸಿ ತಲೆ ಕೆಡಿಸಿಕೊಂಡಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಮೌಲ್ಯಮಾಪಕರ ಪಟ್ಟಿ ತರಿಸುವಾಗಲೂ ಈ ಬಗ್ಗೆ ಎಚ್ಚರ ವಹಿಸಲಿಲ್ಲ. ಮಹತ್ವವಾದ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಾಗಲೂ ಈ ರೀತಿ ನಡೆದುಕೊಂಡಿದ್ದರಿಂದ ಬೇಕಾಬಿಟ್ಟಿ ಮೌಲ್ಯಮಾಪನವಾಗಿದೆ. ಅಲ್ಲದೆ ಹಲವರಿಗೆ ಅನ್ಯಾಯವಾಗಿದೆ ಎಂದು ಸಿಐಡಿ ಅಭಿಪ್ರಾಯಪಟ್ಟಿದೆ.
ಭೂಗೋಳ ಮೋಹ: ಕೆಪಿಎಸ್ಸಿ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಅವರು ಭೂಗೋಳ ಐಚ್ಛಿಕ ವಿಷಯ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ನೀಡುವಂತೆ ಸೂಚಿಸಿದ್ದರು ಎಂಬ ಆರೋಪವಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಇದು ಸತ್ಯ ಎನ್ನುವುದು ಸಿಐಡಿ ಪೊಲೀಸರಿಗೆ ಗೋಚರಿಸಿದೆ. ಮುಖ್ಯ ಪರೀಕ್ಷೆಯಲ್ಲಿ ಭೂಗೋಳವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡ 716 ಅಭ್ಯರ್ಥಿಗಳು ಇದ್ದರು. ಇದರಲ್ಲಿ 571 ಅಭ್ಯರ್ಥಿಗಳು ಪೇಪರ್–1 ಮತ್ತು ಪೇಪರ್–2 ಪರೀಕ್ಷೆಗೆ ಹಾಜರಾಗಿದ್ದರು.
ಇದರಲ್ಲಿ 165 ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಅಂದರೆ ಸಂದರ್ಶನಕ್ಕೆ ಹಾಜರಾದ ಒಟ್ಟು ಅಭ್ಯರ್ಥಿಗಳ ಪೈಕಿ ಶೇ 15ರಷ್ಟು ಮಂದಿ ಭೂಗೋಳವನ್ನು ಐಚ್ಛಿಕ ವಿಷಯವನ್ನಾಗಿ ಪಡೆದುಕೊಂಡವರೇ ಆಗಿದ್ದಾರೆ. ಇದರಿಂದ ಗೋನಾಳ ಭೀಮಪ್ಪ ಮೇಲಿನ ಆರೋಪ ಮೇಲ್ನೋಟಕ್ಕೆ ಸತ್ಯ ಎಂದು ಗೋಚರವಾಗುತ್ತದೆ. ಈ ಬಗ್ಗೆ ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ಸಿಐಡಿ ಅಭಿಪ್ರಾಯಪಟ್ಟಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ಉತ್ತರ ಪತ್ರಿಕೆಗಳನ್ನು ಅರ್ಥಶಾಸ್ತ್ರ ಮೌಲ್ಯಮಾಪಕರು ಹಾಗೂ ಮಾನವಶಾಸ್ತ್ರದ ಉತ್ತರ ಪತ್ರಿಕೆಗಳನ್ನು ಸಮಾಜ ವಿಜ್ಞಾನದ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದಾರೆ ಎನ್ನುವ ಆರೋಪದ ಬಗ್ಗೆಯೂ ತನಿಖೆ ನಡೆಸಿದಾಗ ಇವೆಲ್ಲಾ ಸತ್ಯ ಎನ್ನುವುದು ಗೊತ್ತಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯದಲ್ಲಿ 3,618 ಹಾಗೂ ಮಾನವಶಾಸ್ತ್ರ ವಿಷಯದಲ್ಲಿ 614 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯದ ಉತ್ತರ ಪತ್ರಿಕೆಗಳನ್ನು ಅರ್ಥಶಾಸ್ತ್ರದ 105 ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದಾರೆ.
ಮಾನವಶಾಸ್ತ್ರ ವಿಷಯದ ಉತ್ತರ ಪತ್ರಿಕೆಗಳನ್ನು 21 ಮಂದಿ ಸಮಾಜ ವಿಜ್ಞಾನದ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯದಲ್ಲಿ ವಿಶ್ವವಿದ್ಯಾಲಯ ಕಳುಹಿಸಿದ 10 ಮಂದಿ ತಜ್ಞರ ಪಟ್ಟಿ ಕೆಪಿಎಸ್ಸಿ ಬಳಿ ಇದ್ದರೂ ಅವರಲ್ಲಿ ಯಾರನ್ನೂ ಮೌಲ್ಯಮಾಪನಕ್ಕೆ ಬಳಸಿಕೊಳ್ಳದೇ ಇರುವುದರ ಬಗ್ಗೆ ಸಿಐಡಿ ಅಚ್ಚರಿ ವ್ಯಕ್ತಪಡಿಸಿದೆ.
ಮಾನವ ಶಾಸ್ತ್ರ ವಿಷಯದಲ್ಲಿ 18 ಮಂದಿ ತಜ್ಞ ಮೌಲ್ಯಮಾಪಕರ ಪಟ್ಟಿಯನ್ನು ವಿಶ್ವವಿದ್ಯಾಲಯಗಳಿಂದ ಕೆಪಿಎಸ್ಸಿ ತರಿಸಿಕೊಂಡಿತ್ತು. ಅವರಲ್ಲಿ ಕೇವಲ ನಾಲ್ಕು ಮೌಲ್ಯಮಾಪಕರನ್ನು ಬಳಸಿಕೊಳ್ಳಲಾಗಿದೆ. ಮಾನವ ಶಾಸ್ತ್ರ ವಿಷಯದ ಮೌಲ್ಯಮಾಪನ ಮಾಡಿದ 5 ಮಂದಿ ತಜ್ಞರಲ್ಲಿ ಒಬ್ಬರು ನಿವೃತ್ತ ಪ್ರಾಧ್ಯಾಪಕರು ಎನ್ನುವುದನ್ನೂ ಸಿಐಡಿ ಪತ್ತೆ ಮಾಡಿದೆ. ತಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ನೀಡುವುದಕ್ಕಾಗಿಯೇ ಹೀಗೆ ಮಾಡಲಾಗಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ಅಂತಿಮ ವರದಿಯಲ್ಲಿ ನೀಡುವುದಾಗಿ ಸಿಐಡಿ ಹೇಳಿದೆ.
ಮಾತೃಪ್ರೇಮ: ಕೆಪಿಎಸ್ಸಿ ಸಹಾಯಕ ಕಾರ್ಯದರ್ಶಿ ಪದ್ಮರೇಖಾ ಅವರ ಪುತ್ರ ಅಭಿಷೇಕ್ ಹೆಗಡೆ ಈ ಬಾರಿ ಪರೀಕ್ಷೆ ಬರೆದಿದ್ದು, ಅವರಿಗೆ ತಾಯಿಯೇ ಸಾಕಷ್ಟು ನೆರವು ನೀಡಿದ್ದಾರೆ ಎನ್ನುವುದರ ಕುರಿತು ಸಿಐಡಿ ಪೊಲೀಸರು ತನಿಖೆ ನಡೆಸಿದ್ದಾರೆ. ಅಭಿಷೇಕ್ ಪೂರ್ವಭಾವಿ ಪರೀಕ್ಷೆಯಲ್ಲಿ 236 ಅಂಕ ಗಳಿಸಿ ಮುಖ್ಯ ಪರೀಕ್ಷೆಯ ಅರ್ಹತೆ ಪಡೆದಿದ್ದರು. ಅವರಿಗೆ ಮುಖ್ಯ ಪರೀಕ್ಷೆಯಲ್ಲಿ 995 ಅಂಕ ಹಾಗೂ ಸಂದರ್ಶನದಲ್ಲಿ 150 ಅಂಕ ಬಂದಿತ್ತು.
ಪರೀಕ್ಷಾ ವಿಭಾಗ–2ರ ಸಹಾಯಕ ಕಾರ್ಯದರ್ಶಿಯೂ ಆಗಿರುವ ಪದ್ಮರೇಖಾ ಅವರು ತಮ್ಮ ಪುತ್ರ ಈ ಬಾರಿ ಕೆಪಿಎಸ್ಸಿ ಪರೀಕ್ಷೆಗೆ ಹಾಜರಾಗಿದ್ದ ವಿಷಯವನ್ನು ಮೊದಲೇ ಆಯೋಗಕ್ಕೆ ತಿಳಿಸಿದ್ದರು. ಇದರಿಂದಾಗಿ ಅವರನ್ನು ಪರೀಕ್ಷಾ ಪ್ರಕ್ರಿಯೆಯಿಂದ ದೂರ ಇಡಲಾಗಿತ್ತು ಎಂದು ಸಿಐಡಿ ಪೊಲೀಸರಿಗೆ ಕೆಪಿಎಸ್ಸಿ ತಿಳಿಸಿದೆ. ಆದರೆ ಪದ್ಮರೇಖಾ ಅವರು ತಮ್ಮ ಕರ್ತವ್ಯಕ್ಕೆ ನೇರ ಸಂಬಂಧಪಡದ, 2011ರ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಸಕ್ರಿಯರಾಗಿದ್ದ ಕೆಪಿಎಸ್ಸಿ ಸದಸ್ಯರು ಹಾಗೂ ಅವರ ಆಪ್ತ ಕಾರ್ಯದರ್ಶಿಗಳನ್ನು ಪದೇ ಪದೇ ಸಂಪರ್ಕಿಸಿದ್ದರು ಎನ್ನುವುದನ್ನು ಸಿಐಡಿ ಪತ್ತೆ ಮಾಡಿದೆ.
ಪದ್ಮರೇಖಾ ಅವರು ಕೆಪಿಎಸ್ಸಿ ಸದಸ್ಯ ಪಾರ್ಶ್ವನಾಥ್ ಅವರನ್ನು 5 ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಪಾರ್ಶ್ವನಾಥ್ ಅವರೂ ಕೂಡ ಪದ್ಮರೇಖಾ ಅವರಿಗೆ ತಮ್ಮ ದೂರವಾಣಿಯಿಂದ ಕರೆ ಮಾಡಿದ್ದರು. ಪಾರ್ಶ್ವನಾಥ್ ಅವರ ಆಪ್ತ ಸಹಾಯಕ ನೇಮಿರಾಜು ಅವರಿಗೆ ಪದ್ಮರೇಖಾ 10 ಬಾರಿ ದೂರವಾಣಿ ಕರೆ ಮಾಡಿದ್ದರು. ಅಲ್ಲದೆ 3 ಎಸ್ಎಂಎಸ್ ಕಳುಹಿಸಿದ್ದರು. ನೇಮಿರಾಜು ಕೂಡ ಪದ್ಮರೇಖಾ ಅವರಿಗೆ 5 ಬಾರಿ ಕರೆ ಮಾಡಿದ್ದರು ಮತ್ತು 5 ಎಸ್ಎಂಎಸ್ ಕಳುಹಿಸಿದ್ದರು. ಮಂಗಳಾ ಶ್ರೀಧರ್ ಅವರ ಪತಿ ಶ್ರೀಧರ್ ನಾರಾಯಣಿ ಅವರೂ ಪದ್ಮರೇಖಾ ಅವರನ್ನು ಮೂರು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಕೆಪಿಎಸ್ಸಿ ಆಗಿನ ಕಾರ್ಯದರ್ಶಿ ಸುಂದರ್ ಅವರನ್ನೂ ಪದ್ಮರೇಖಾ ಸಂಪರ್ಕಿಸಿದ್ದರು.
ಪದ್ಮರೇಖಾ ಅವರು ಇಷ್ಟೆಲ್ಲಾ ಜನರೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದು ಹಾಗೂ ಅಭೀಷೇಕ್ ಹೆಗಡೆ ಅವರಿಗೆ ಸಂದರ್ಶನದಲ್ಲಿ ಅತಿ ಹೆಚ್ಚಿನ ಅಂಕ ಲಭ್ಯವಾಗಿದ್ದು ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ಸತ್ಯವಾಗಿರುವಂತೆ ಕಾಣುತ್ತದೆ. ಈ ಬಗ್ಗೆ ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೆಪಿಎಸ್ಸಿ ನಿಯಮದ ಪ್ರಕಾರ ಆಯೋಗದ ಸದಸ್ಯರು, ಅಧಿಕಾರಿಗಳು ಹಾಗೂ ಯಾವುದೇ ಸಿಬ್ಬಂದಿಯ ಸಂಬಂಧಿಕರು ಪರೀಕ್ಷೆಗೆ ಹಾಜರಾಗಿದ್ದರೆ ಆ ವಿಷಯವನ್ನು ಮೊದಲೇ ಅವರು ಆಯೋಗದ ಕಾರ್ಯದರ್ಶಿ ಬಳಿ ಘೋಷಿಸಿಕೊಳ್ಳಬೇಕು. ಅಲ್ಲದೆ ಅವರನ್ನು ಪರೀಕ್ಷಾ ಪ್ರಕ್ರಿಯೆಯಿಂದ ದೂರವಿಡಬೇಕು. ಆದರೆ ಈ ಬಾರಿ ಕೆಪಿಎಸ್ಸಿಯ ಹಲವಾರು ಸಿಬ್ಬಂದಿ ತಮ್ಮ ಮಕ್ಕಳು ಅಥವಾ ಸಂಬಂಧಿಗಳು ಪರೀಕ್ಷೆ ಬರೆಯುತ್ತಿರುವ ವಿಷಯವನ್ನು ಕಾರ್ಯದರ್ಶಿಗೆ ತಿಳಿಸಿಲ್ಲ.
ಅಚ್ಚರಿಯ ಅಂಶ ಎಂದರೆ ಆಯೋಗದ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ಪತ್ನಿಯ ಹತ್ತಿರದ ಸಂಬಂಧಿ ಎಚ್.ಎಸ್.ಸಿಂಧು ಪರೀಕ್ಷೆಗೆ ಹಾಜರಾಗಿದ್ದರು. ಈ ವಿಷಯವನ್ನು ಭೀಮಪ್ಪ ಅವರು ಆಯೋಗದ ಕಾರ್ಯದರ್ಶಿ ಮುಂದೆ ಅಧಿಕೃತವಾಗಿ ಘೋಷಿಸಿರಲಿಲ್ಲ. ಇದು ಅವರಿಗೆ ಆಯೋಗದ ನಿಯಮಾವಳಿಯ ಬಗ್ಗೆ ಯಾವುದೇ ಗೌರವ ಇರಲಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಸಿಐಡಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
2011ರ ಪ್ರೊಬೇಷನರಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದ ನಂತರ ನೂರಾರು ಅಭ್ಯರ್ಥಿಗಳು ಅಹವಾಲು ನೀಡಿರುವುದರ ಜತೆಗೆ ಕೆಲವು ದಾಖಲೆಗಳನ್ನೂ ಒದಗಿಸಿದ್ದಾರೆ. ಸಿಐಡಿಗೆ 116 ದೂರುಗಳು ಬಂದಿದ್ದವು. ಅದರಲ್ಲಿ 40 ದೂರುಗಳನ್ನು ಸರ್ಕಾರ ಕಳುಹಿಸಿಕೊಟ್ಟಿತ್ತು.
ನೇರವಾಗಿ 76 ದೂರುಗಳು ಬಂದವು. ಅದರಲ್ಲಿ ಮುಖ್ಯ ಪರೀಕ್ಷೆಯ ಬಗ್ಗೆ 39, ಸಂದರ್ಶನದ ಬಗ್ಗೆ 31, ಸಂದರ್ಶನ ಮತ್ತು ಮುಖ್ಯ ಪರೀಕ್ಷೆ ಎರಡೂ ಸೇರಿದಂತೆ 13 ಹಾಗೂ ಕೆಪಿಎಸ್ಸಿ ನಡೆಸುವ ಇತರ ಪರೀಕ್ಷೆ ಹಾಗೂ ಹಿಂದಿನ ಪರೀಕ್ಷೆಗಳ ಬಗ್ಗೆ 33 ದೂರುಗಳು ಬಂದಿದ್ದವು. ಇವು ಗಳನ್ನೆಲ್ಲಾ ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸಿಐಡಿ ಮಧ್ಯಂತರ ವರದಿ ನೀಡಿದೆ.
(ಕಳ್ಳನ ಕೈಗೇ ಕೀ ಕೊಟ್ಟ ಕೆಪಿಎಸ್ಸಿ: ನಾಳಿನ ಸಂಚಿಕೆಯಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.