ಕಲಘಟಗಿ: ತರಗತಿ ಕೋಣೆಯ ಶಿಕ್ಷಣಕ್ಕಿಂತ ಕೋಣೆಯ ಹೊರಗಡೆ ಪಡೆಯುವ ಶಿಕ್ಷಣ ಅತ್ಯಂತ ಮಹತ್ವವಾದುದು ಎಂದು ಪ್ರಾವಿನ್ಸಿಯಲ್ ಸುಪೀರಿಯರ್ ಬ್ರ.ಜಾರ್ಜ್ ಕಲನ್ಗೊಡ ನುಡಿದರು.
ಪಟ್ಟಣದ ಗುಡ್ನ್ಯೂಸ್ ವೆಲ್ಫೇರ್ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಸುಂದರ ಕಟ್ಟಡಗಳು, ಗಣಕಯಂತ್ರಗಳು, ಡಿಜಿಟಲ್ ಉಪಕರಣಗಳೇ ಶಿಕ್ಷಣದ ಹೃದಯವಲ್ಲ; ಅವು ಕೇವಲ ಮಾಧ್ಯಮ. ಮೌಲ್ಯಗಳಿಂದ ಕೂಡಿದ ಶಿಕ್ಷಣವೇ ನಿಜವಾದ ಶಕ್ತಿ ಎಂದರು.ಆದುದರಿಂದ ನಾಳಿನ ನಾಯಕರಾಗುವ ಯುವ ವಿದ್ಯಾರ್ಥಿಗಳು ತಮ್ಮ ಮುಂದಿರುವ ಜವಾಬ್ದಾರಿಯನ್ನು ಅರಿತು, ಪ್ರಯತ್ನಶೀಲತೆ ಮತ್ತು ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕಿದೆ ಎಂದರಲ್ಲದೇ, ಸಂಸ್ಥೆಯ ಬಹುದಿನಗಳ ಕನಸೊಂದು ನನಸಾದ ಹೆಮ್ಮೆ ಇದಾಗಿದೆ ಎಂದರು.
ಸಮಾಜದಲ್ಲೆಲ್ಲೆಡೆ ಹರಡಿರುವ ಸಂಕಷ್ಟ ಸ್ಥಿತಿಯನ್ನು ನಿವಾರಿಸುವಲ್ಲಿ, ಗುಡ್ನ್ಯೂಸ್ ಸಂಸ್ಥೆಯು ಸುವಾರ್ತೆಯನ್ನು ಹರಡುವ ಯತ್ನದಲ್ಲಿ ಯಶ ಸಾಧಿಸಲಿ ಎಂದು ಬೆಳಗಾವಿ ಪ್ರಾಂತದ ಧರ್ಮಾಧ್ಯಕ್ಷ ಬಿಷಪ್ ಡಾ.ಪೀಟರ್ ಮಚಾಡೊ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಿ.ಪಿ.ಐ.ಮಹಾಂತೇಶ ಜಿದ್ದಿ, ಪ.ಪಂ.ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ ಮಾತನಾಡಿದರು. ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಪ್ರೊ.ಪಿ.ವಿ.ಅಲೆಕ್ಸಾಂಡರ್ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಫಾ.ಮರಿಯಾ ಅಂಥೋನಿ, ಸಂಸ್ಥೆಯ ಕೋಶಾಧ್ಯಕ್ಷ ಹೃದಯ ಮೈಕಲ್ ವೇದಿಕೆಯಲ್ಲಿ ಹಾಜರಿದ್ದರು. ಪ್ರಾಚಾರ್ಯೆ ಪಿ.ಎ.ಅಲಿಯಾ ಕುಟ್ಟಿ ಸ್ವಾಗತಿಸಿದರು. ಡಾ.ಮಹೇಶ ಹೊರಕೇರಿ ನಿರೂಪಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಬ್ರ.ಸಾಬು ಜೋಸೆಫ್ ವಂದಿಸಿದರು.