ಹುಬ್ಬಳ್ಳಿ: ಮೌಲ್ಯ ಆಧಾರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ. ಪ್ರಾಮಾಣಿಕತೆ, ಶ್ರದ್ಧೆ, ಪರಿಶ್ರಮ, ಶಿಸ್ತು ಪರಿಪಾಲನೆ, ತ್ಯಾಗ ಮನೋಭಾಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ನೆರವಾಗುವುದೇ ನೈಜ ಶಿಕ್ಷಣವಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ರೈಲ್ವೆಯ ಹೆಚ್ಚುವರಿ ಪ್ರಬಂಧಕ ಪ್ರೇಮಚಂದ ಅಭಿಪ್ರಾಯಪಟ್ಟರು.
ನಗರದ ಗದಗ ರಸ್ತೆಯಲ್ಲಿರುವ ರೈಲ್ವೆ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ತಾರ್ಕಿಕ ಆಲೋಚನೆ, ನಿರ್ಧಾರ ಕೈಗೊಳ್ಳಬೇಕಾದ ರೀತಿಯನ್ನೂ ಶಿಕ್ಷಣ ಕಲಿಸಿಕೊಡಬೇಕು ಎಂದು ಅವರು ಹೇಳಿದರು.ಶಾಲೆ ಪ್ರಕಟಿಸುವ ‘ವಿದ್ಯಾ’ ಎಂಬ ವಾರ್ಷಿಕ ಪತ್ರಿಕೆಯನ್ನು ಪ್ರೇಮಚಂದ ಬಿಡುಗಡೆ ಮಾಡಿದರು.
ವಿಭಾಗೀಯ ಎಂಜಿನಿಯರ್ ಶೋಭನಾಥ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸಿಬ್ಬಂದಿ ಅಧಿಕಾರಿ ಸಹದೇವನ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಎವಿಆರ್ಕೆ ಸಾಯಿನಾಥ ಗೌರವ ಅತಿಥಿಗಳಾಗಿದ್ದರು.
ಶಾಲೆಯ ಪ್ರತಿಯೊಂದು ವರ್ಗದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಕ್ರೀಡೆ, ಸ್ಕೌಟ್, ಎನ್ಸಿಸಿ ಹಾಗೂ ಇತರೆ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನಗಳನ್ನುವಿತರಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ರುಕ್ಮಿಣಿ ವಡವಿ ಅವರು ಶಾಲೆಯ ವಾರ್ಷಿಕ ವರದಿ ಮಂಡಿಸಿದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ತೇರಿಸಮ್ಮಾ ಕ್ಸೇವಿಯರ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಸಿಬ್ಬಂದಿ ಅಧಿಕಾರಿ ಸಹದೇವನ್ ಸ್ವಾಗತಿಸಿದರು. ಸಹಾಯಕ ಶಿಕ್ಷಕ ಪಿ. ಪ್ರಭಾಕರನ್ ವಂದಿಸಿದರು. ಶಾಲೆಯ ಶಿಕ್ಷಕರಾದ ಶಿರ್ಲಿ ಡೆನಿಸ್, ಆರ್.ಜೆ.ಭೋಗೇಶಪ್ಪ, ವೆಂಕಟ ಜಗನ್ನಾಥ ಬಿ. ಉಪಸ್ಥಿತರಿದ್ದರು.