ಸೇಡಂ: ಎಳೆಯ ಮಕ್ಕಳಿಗೆ ವಿದ್ಯೆ, ಬುದ್ಧಿ, ಶ್ರಮ ಒಳಗೊಂಡ ಮೌಲ್ಯಾಧಾರಿತ ಜೀವನ ರೂಪಿಸುವಲ್ಲಿ ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿ ಮಹತ್ವದ್ದು ಎಂದು ಸಹಾಯಕ ಆಯುಕ್ತ ಡಿ.ಕೆ. ರವಿ ಅಭಿಪ್ರಾಯಪಟ್ಟರು.
ಅವರು ಸೋಮವಾರ ಪಟ್ಟಣದ ಮಾತೃಛಾಯಾ ಪ್ರೌಢ ಶಾಲೆಯ 31ನೇ ಶಾಲಾ ವಾರ್ಷಿಕೋತ್ಸವ ಮತ್ತು ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
5 ವರ್ಷದವರೆಗಿನ ಮಕ್ಕಳಿಗೆ ಕಾಲ ಕಾಲಕ್ಕೆ ಅವಶ್ಯ ಇರುವ ಆಹಾರವನ್ನು ಪ್ರೀತಿಯಿಂದ ನೀಡಬೇಕು. ಆಟಗಳನ್ನು ವಾತ್ಸಲ್ಯದಿಂದ ಕಲಿಸಿ ಪ್ರೋತ್ಸಾಹಿಸಬೇಕು ಎಂದು ಅವರು ನುಡಿದರು.
ಈ ಅವಧಿಯಲ್ಲಿ ಮಾತಿನಿಂದ ತಿಳಿ ಹೇಳಬೇಕು. ಅಗತ್ಯವಿದ್ದರೆ ದಂಡ ಪ್ರಯೋಗ ಮಾಡಬೇಕು. ನೀತಿ ನಿಯಮ ಪಾಲನೆ, ಉತ್ತಮ ಮನೋಭಾವ ಬೆಳೆಸಿಕೊಳ್ಳಲು ಮಾರ್ಗದರ್ಶನ ಕೊಡಬೇಕು ಎಂದರು. 16 ವಯಸ್ಸಿನ ನಂತರ ಮಕ್ಕಳನ್ನು ಸ್ನೇಹಿತರಾಗಿ ಕಾಣುವುದು ಅಗತ್ಯ ಎಂದು ಅವರು ವಿವರಿಸಿದರು.
ರಾಮಚಂದ್ರ ಜೋಶಿ ಸ್ವಾಗತಿಸಿ ಪರಿಚಯಿಸಿದರು. ಬಸವರಾಜ ಮಾಲಿಪಾಟೀಲ ನಿರೂಪಿಸಿದರು. ಪ್ರಾಚಾರ್ಯ ಶಿವಯ್ಯ ಮಠಪತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸದಾಶಿವ ಸ್ವಾಮಿ ಆಶೀರ್ವಚನ ನೀಡಿದರು. ಡಾ. ಉದಯಕುಮಾರ ಶಹಾ, ಡಾ. ನಾಗರೆಡ್ಡಿ ಪಾಟೀಲ ಮಾಧವಾರ, ರಾಮಾನುಜದಾಸ ತಾಪಡಿಯಾ, ಸ್ಮರಣ ಸಂಚಿಕೆ ಸಂಪಾದಕ ಸೂರ್ಯಕಾಂತ ಪಾಲ್ವೆ ಇದ್ದರು. ಮುಖ್ಯಗುರು ಬಸವರಾಜ ಮಳಗಿ ವಂದಿಸಿದರು.