ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಗ್ನಿಟ್ಯೂಡ್‌ನಲ್ಲಿ ,ವನೀತಾ ಲೋಕ,

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಂದದ ಚಿತ್ರವೊಂದು ಮನೆಯ ಗೋಡೆ ಅಲಂಕರಿಸಿದರೆ? ಮನೆಗೆ ಹೊಸ ಮೆರುಗು. ದಣಿದು ಬಂದ ಮನ ಒಮ್ಮೆ ಅತ್ತಕಡೆ ದೃಷ್ಟಿ ಹಾಯಿಸಿದರೆ ಸುಸ್ತೆಲ್ಲಾ ಮಾಯ. ಸಂಜೆ ಹೊತ್ತಲ್ಲಿ ಕಾಡುವ ಬೇಸರವನ್ನು ಹೊಡೆದೋಡಿಸಿ ತುಸು ಸಾಂತ್ವನ ನೀಡುತ್ತದೆ ಗೋಡೆಯ ಮೂಕ ಚಿತ್ರಪಟ.

ಇಷ್ಟಪಟ್ಟರೆ ಒಂದೇ ಚಿತ್ರವನ್ನು ಎಷ್ಟು ಬಾರಿಯಾದರೂ ರೀ-ಪೇಂಟ್ ಮಾಡಿಕೊಡುತ್ತಾರೆ. ಆದರೆ ಇ್ಲ್ಲಲೊಂದು ಕಲಾ ಗ್ಯಾಲರಿ ಒಮ್ಮೆ ಮೂಡಿಸಿದ ಚಿತ್ರವನ್ನು ಮತ್ತೊಮ್ಮೆ `ಪೇಂಟ್~ ಮಾಡುವುದಿಲ್ಲ. ಒಂದೇ ಚಿತ್ರಕ್ಕೆ ಎಷ್ಟು ಆರ್ಡರ್‌ಗಳು ಬಂದರೂ ಅದಕ್ಕೆ ಇಲ್ಲಿ ಅವಕಾಶವಿಲ್ಲ. ಹೊಸ ನಮೂನೆಯ ಚಿತ್ರಗಳು ಮಾತ್ರ ಒಡಮೂಡುವುದು.

ಉದ್ಯಾನನಗರಿಯ `ಮ್ಯಾಗ್ನಿಟ್ಯೂಟ್ ಗ್ಯಾಲರಿ~ ಇರುವುದೇ ಹಾಗೆ. ಹೊಸಬಗೆಯ ಚಿತ್ರಗಳಿಗೆ ತೆರೆದುಕೊಳ್ಳುತ್ತಿರುವ ಸಂಸ್ಥೆ ಇದು. ಕಳೆದ 11 ವರ್ಷಗಳಿಂದ ಈ ಕಲಾ ಗ್ಯಾಲರಿ ಇದೇ ಹಾದಿಯಲ್ಲಿ ಮುಂದೆ ಸಾಗುತ್ತಿದೆ. ಈ ವಿಶೇಷತೆಯಿಂದಲೇ ನವೆಂಬರ್‌ನಲ್ಲಿ `ಮೋಸ್ಟ್ ಇನ್ನೊವೇಟಿವ್ ಆರ್ಟ್ ಗ್ಯಾಲರಿ ಇನ್ ಬೆಂಗಳೂರು~ ಪ್ರಶಸ್ತಿಗೆ ಭಾಜನವಾಗಿದೆ.
ಪ್ರತಿ ತಿಂಗಳು ಒಂದೊಂದು ವಿಷಯವನ್ನಿಟ್ಟುಕೊಂಡು ಕಲಾ ಪ್ರದರ್ಶನ ನಡೆಸುತ್ತಾ ಬಂದಿರುವ ಸಂಸ್ಥೆ ಈ ತಿಂಗಳ ಪ್ರದರ್ಶನಕ್ಕೆ `ವನಿತೆ~ ಎಂಬ ಥೀಮ್ ಆಯ್ದುಕೊಂಡಿದೆ. ಫೆಬ್ರವರಿ 14ರ ತನಕ ಈ ಪ್ರದರ್ಶನವಿರುತ್ತದೆ.

ವನಿತೆಯರು ದವಸ ಧಾನ್ಯಗಳನ್ನು ಕುಟ್ಟುತ್ತಿರುವುದು, ಮೃದಂಗ ವಾದನದಲ್ಲಿ ತಲ್ಲೆನರಾದ ಮಾನಿನಿಯರು, ಅಡುಗೆ ಕೆಲಸದಲ್ಲಿ ನಿರತರಾಗಿರುವುದು, ಗಾರೆ ಕೆಲಸ ಮಾಡುತ್ತಿರುವುದು... ಹೀಗೆ ಹಳ್ಳಿ ಚಿತ್ರಣದ ವಿವಿಧ ಮುಖಗಳನ್ನು ಪರಿಚಯಿಸುವ ಪ್ರಯತ್ನ ಇವರದು.

ವನಿತೆಯ ಕಾರ್ಯಕ್ಷೇತ್ರದ ಹರವು ಹಳ್ಳಿಗಷ್ಟೇ ಸೀಮಿತವಾಗಿರದೆ ಬೇರೆಬೇರೆ ಮಜಲುಗಳಲ್ಲಿ ತೆರೆದುಕೊಳ್ಳುತ್ತಿರುವುದು ಸಹ ಇವರ ಕುಂಚದಲ್ಲಿ ಮೂಡಿವೆ.
ಆಕ್ರೆಲಿಕ್, ಮಿಕ್ಸ್ ಮೀಡಿಯಾ ಹಾಗೂ ಆಯಿಲ್ ಪೇಂಟ್‌ಗಳ ಮೂಲಕ ಕ್ಯಾನ್‌ವಾಸ್ ಮೇಲೆ ಇಲ್ಲಿ ಚಿತ್ರಗಳನ್ನು ಮೂಡಿಸಲಾಗುತ್ತದೆ. ಗುಲ್ಬರ್ಗ, ದಾವಣಗೆರೆ, ಪಶ್ಚಿಮ ಬಂಗಾಳ ದೇಶದ ನಾನಾ ಭಾಗಗಳಲ್ಲಿನ ಕಲಾಕಾರರು ಗ್ಯಾಲರಿಯಲ್ಲಿ ಕುಂಚಕ್ಕೆ ಮತ್ತಷ್ಟು ಮೆರುಗು ನೀಡುತ್ತಿದ್ದಾರೆ.

ಕಲೆ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ನಾನಾ ಕ್ಷೇತ್ರಗಳಿಗೆ ಮಹಿಳೆ ವಸ್ತುವಾಗಿ ನಿಲ್ಲುತ್ತಾಳೆ. ಆಕೆಯ ಹಾವ, ಭಾವ, ಭಂಗಿ ನೋಡುಗರ ಸೆಳಯುವಂತೆ ಒಡಮೂಡಿವೆ.
ಸಮಾಜದ ಮುಖ್ಯ ಭೂಮಿಕೆಯಲ್ಲಿ `ವನಿತೆ~ಯ ಪಾತ್ರ ಹಿರಿದು. ಹಳ್ಳಿಯಿಂದ ದೆಹಲಿಯವರೆಗೂ ಆಕೆಯ ವ್ಯಾಪ್ತಿ ಇದೆ. ಇದರ ಪ್ರತೀಕವಾಗಿಯೇ ಈ ಬಾರಿಯ ಪ್ರದರ್ಶನವನ್ನು ವನಿತೆಗೆ ಮೀಸಲಿಟ್ಟಿದ್ದೇವೆ ಎನ್ನುತ್ತಾರೆ ಗ್ಯಾಲರಿಯ ವ್ವಸ್ಥಾಪಕ ನಿರ್ದೇಶಕ ಎಸ್.ಆರ್.ಮಗರ್.

ಕಲೆ ಕೇವಲ ದೊಡ್ಡವರ ಸ್ವತ್ತಾಗಿದೆ. ದುಡಿದವರು ಮಾತ್ರ ಅದನ್ನು ಕೊಂಡು ಮನೆ ಅಲಂಕರಿಸಿಕೊಳ್ಳುವಂತಾಗಿದೆ. ಹಾಗಾಗದೆ ಜನಸಾಮಾನ್ಯರಿಗೂ ಅದು ತಲುಪಬೇಕು. ಆಗಲೇ ಕುಂಚಕ್ಕೆ ಬೆಲೆ. ಈ ಉದ್ದೇಶದಿಂದಲೇ ಈ ಗ್ಯಾಲರಿಯನ್ನು ಆರಂಭಿಸಿದ್ದು ಎನ್ನುವ ಮಗರ್ ಕಲೆಯನ್ನು ಜನಸಾಮಾನ್ಯರ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ.
`ಇಲ್ಲಿಯ ಕಲೆಗೆ ವಿದೇಶೀಯರು ಹೆಚ್ಚು ಮುಗಿಬೀಳುತ್ತಾರೆ. ಆದರೆ ತವರೂರಿನಲ್ಲಿ ಇದೇನು ಮಹಾ ಎಂದು ಮೂಗು ಮುರಿಯುವವರೇ ಹೆಚ್ಚು. ಇನ್ನು ಕೊಳ್ಳುವ ಮಾತೆಲ್ಲಿ~ ಎಂದು ಹತಾಶೆಯಿಂದ ಪ್ರಶ್ನಿಸುತ್ತಾರೆ.

ಸಾಯಿಬಾಬಾ ಚಿತ್ರ ರೀ-ಪ್ರಿಂಟ್ ಮಾಡಿದ್ದು ಬಿಟ್ಟರೆ ಬೇರೆ ಉದಾಹರಣೆಗಳಿಲ್ಲ. ಕಂಪೆನಿಗೆ ಗಿಫ್ಟ್ ಆರ್ಡರ್‌ಗಳನ್ನು ಈ ಗ್ಯಾಲರಿ ಪೂರೈಸುತ್ತದೆ. ವಿಶೇಷವೆಂದರೆ ಗಣೇಶನ ಮೂರ್ತಿಗೆ ಸಾವಿರ ಆರ್ಡರ್‌ಗಳು ಬಂದರೆ ಅಷ್ಟೂ ನಮೂನೆಯ ಹೊಸ ಗಣೇಶಗಳು ಸೃಷ್ಟಿಯಾಗುತ್ತವೆ. ಒಂದು ಸಾವಿರದಿಂದ 3 ಲಕ್ಷದವರೆಗಿನ ಚಿತ್ರಪಟಗಳು ಇಲ್ಲಿ ಲಭ್ಯ. ಕಲಾಸಕ್ತರು ಒಮ್ಮೆ ಭೇಟಿ ನೀಡಬಹುದು. ಗೊಡೆಗೊಂದು ಅಂದದ ಪೇಂಟಿಂಗ್ ಇದ್ದರೆ ಚೆನ್ನ ಅಲ್ಲವೇ....?

ಸಂಪರ್ಕಕ್ಕೆ: 140/13, 27ನೇ ಅಡ್ಡ ರಸ್ತೆ, 13ನೇ ಮುಖ್ಯ ರಸ್ತೆ, 3ನೇ ಹಂತ, ಜಯನಗರ, ಮೊ: 99001 17201.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT