ನವದೆಹಲಿ: ಮಲೆಯಾಳ ಮನೋರಮಾ ಪತ್ರಿಕಾ ಗುಂಪಿನ ಪ್ರಧಾನ ಸಂಪಾದಕರಾಗಿದ್ದ ಕೆ ಎಂ ಮ್ಯಾಥ್ಯೂ ಅವರು `ಭಾರತೀಯ ದಂತಕಥೆ~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಬಣ್ಣಿಸಿದ್ದಾರೆ.
ಅಂಚೆ ಇಲಾಖೆಯು ಮಂಗಳವಾರ ಸಂಸತ್ತಿನಲ್ಲಿರುವ ಪ್ರಧಾನಿಯವರ ಕಚೇರಿಯಲ್ಲಿ ಕೆ ಎಂ ಮ್ಯಾಥ್ಯೂ ಅವರ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು `ಮುಂದಿನ ಪೀಳಿಗೆ ಅನುಸರಿಸಬೇಕಾದ ಜೀವನ ಮೌಲ್ಯಗಳನ್ನು ಅವರು ಬಿಟ್ಟುಹೋಗಿದ್ದಾರೆ~ ಎಂದು ಶ್ಲಾಘಿಸಿದರು.
ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಕಪಿಲ್ ಸಿಬಲ್ ಮಾತನಾಡಿ `ಮ್ಯಾಥ್ಯೂ ಅವರು ತಮ್ಮ ಜೀವಿತಾವಧಿಯಲ್ಲಿ ಕೋಮು ಸೌಹಾರ್ದ, ರಾಷ್ಟ್ರೀಯ ಸಮಗ್ರತೆಯ ಮೌಲ್ಯಗಳನ್ನು ತಮ್ಮ ನೇತೃತ್ವದ ಮಾಧ್ಯಮಗಳ ಮೂಲಕ ಎತ್ತಿ ಹಿಡಿದಿದ್ದವರು~ ಎಂದರು.
ಮಲೆಯಾಳ ಮನೋರಮಾ ಪತ್ರಿಕಾ ಗುಂಪಿನ ಪ್ರಧಾನ ಸಂಪಾದಕ ಮತ್ತು ಮ್ಯಾಥ್ಯೂ ಅವರ ಹಿರಿಯ ಪುತ್ರ ಮಾಮ್ಮೆನ್ ಮ್ಯಾಥ್ಯೂ, ಪುತ್ರಿ ತಂಗಮ್ ಮ್ಯಾಥ್ಯೂ, ರಾಜ್ಯಸಭಾ ಸದಸ್ಯ ಪಿ ಜೆ ಕುರಿಯನ್, ಮಲೆಯಾಳ ಮನೋರಮಾ ಪತ್ರಿಕೆಯ ದೆಹಲಿ ಬ್ಯೂರೊದ ಸ್ಥಾನಿಕ ಸಂಪಾದಕ ಕೆ ಎಸ್ ಸಚ್ಚಿದಾನಂದ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.