ಲಾಹೋರ್ (ಪಿಟಿಐ): ಅತ್ಯಂತ ಕ್ಲಿಷ್ಟಕರವಾದ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ಶೇಖ್ ಜಾಯೇದ್ ಆಸ್ಪತ್ರೆಯಲ್ಲಿ ಭಾರತ ಮತ್ತು ಪಾಕಿಸ್ತಾನ ವೈದ್ಯರ ತಂಡ ಶುಕ್ರವಾರ ಜಂಟಿಯಾಗಿ ನೆರವೇರಿಸಿದೆ.
`ಜೀವಂತ ದಾನಿಯ ಯಕೃತ್ತನ್ನು ಕಸಿ ಮಾಡುವುದು ಅತ್ಯಂತ ಸೂಕ್ಷ್ಮ ಮತ್ತು ಜಟಿಲವಾದ ಕಾರ್ಯ. ಏಕೆಂದರೆ ಈ ಶಸ್ತ್ರಚಿಕಿತ್ಸೆಯಲ್ಲಿ ರೋಗಿ ಮತ್ತು ದಾನಿ ಇಬ್ಬರೂ ಅಪಾಯದ ಸ್ಥಿತಿಯಲ್ಲಿರುತ್ತಾರೆ. ಇದೀಗ ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳು, ಅಂಗಾಂಗ ದಾನಿಗಳ ಸ್ಥಿತಿ ಸ್ಥಿರವಾಗಿದ್ದು, ಅತ್ಯಂತ ಎಚ್ಚರಿಕೆ ವಹಿಸಲಾಗಿದೆ~ ಎಂದು ತಜ್ಞರ ತಂಡ ತಿಳಿಸಿದೆ.
ಪಾಕಿಸ್ತಾನದ ವೈದ್ಯರ ಮನವಿಯ ಮೇರೆಗೆ ದೆಹಲಿಯ ಅಪೋಲೊ ಆಸ್ಪತ್ರೆಯ ಅಂಗಾಂಗ ಕಸಿ ತಜ್ಞ ಸುಭಾಷ್ ಗುಪ್ತ ಜತೆ ಅವರ ಮೂವರು ಸಹೋದ್ಯೋಗಿಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದರು. `ಉಭಯ ದೇಶಗಳ ತಜ್ಞ ವೈದ್ಯರ ಸಹಯೋಗದಲ್ಲಿ ಮೊದಲ ಬಾರಿ ನಡೆದ ಇಂತಹ ಶಸ್ತ್ರಚಿಕಿತ್ಸೆ ಪಾಕಿಸ್ತಾನದ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು~ ಎಂದು ಪಾಕಿಸ್ತಾನದ ವೈದ್ಯರು ಹೇಳಿದ್ದಾರೆ. ಖಾನುಮ್ ಮೌಲ ಅವರಿಗೆ ಹತ್ತಿರದ ಸಂಬಂಧಿ ಇರ್ಷಾದ್ ಬೀಬಿ ಅವರ ಯಕೃತ್ತು ಮತ್ತು 45 ವರ್ಷದ ಅಬಿದಾ ಪರ್ವೀನ್ ಎಂಬುವವರಿಗೆ ಅವರ 19 ವರ್ಷದ ಮಗ ನೀಡಿದ ಯಕೃತ್ತನ್ನು ಅಳವಡಿಸಲಾಗಿದೆ.