ಬ್ರಹ್ಮಾವರ: ಯಾವುದೇ ಜಾಗೃತಿ ಕಾರ್ಯಕ್ರಮ ಧ್ವನಿವರ್ಧಕದ ಮೂಲಕ ಬಿತ್ತರಿಸಿದಲ್ಲಿ ಅದು ಸಫಲವಾಗುವುದಿಲ್ಲ. ವೇದಿಕೆಯಲ್ಲಿ ಒಂದಿಷ್ಟು ಭಾಷಣ ಮಾಡಿದರೆ ಜಾಗೃತಿ ಆಗುವುದಿಲ್ಲ. ನಮ್ಮ ಮಣ್ಣಿನ ಕಲೆಯಾದ ಯಕ್ಷಗಾನದ ಮೂಲಕ ಜಾಗೃತಿ ಮೂಡಿಸುವುದರಿಂದ ಪಲ್ಸ್ ಪೋಲಿಯೊದಂತಹ ಕಾರ್ಯಕ್ರಮ ಯಶಸ್ವಿಗೊಳುತ್ತದೆ. ಅಲ್ಲದೇ ಜನರಲ್ಲಿ ಅರಿವು ಮೂಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ-ಸಾಲಿಗ್ರಾಮ ರೋಟರಿ ಕ್ಲಬ್, ಇಂಟರ್ಯಾಕ್ಟ್ ಕ್ಲಬ್, ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು ಕೇಂದ್ರ, ಕೋಟದ ಸಮುದಾಯ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಕೋಟತಟ್ಟು ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ನಡೆದ ಆರೋಗ್ಯ ಅರಿವು ಸರಣಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬದುಕಿನ ಏರಿಳಿತಗಳನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸುವ ಯಕ್ಷಗಾನ ಬದುಕಿಗೆ ಅರ್ಥ ಕೊಡುವಂತಹದ್ದು. ಹಾಗೆ ಕಥೆಗಳ ಮೂಲಕ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಾಧ್ಯ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀಧರ ಹಂದೆ, ರೋಟರಿಯ ರತ್ನಾಕರ್, ತಾ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ಕೋಟ ಆರೋಗ್ಯ ಕೇಂದ್ರದ ಡಾ.ಅನಿಲ್ ಕುಮಾರ್, ಗ್ರಾ.ಪಂ. ಸದಸ್ಯ ಪ್ರಭಾಕರ ಕಾಂಚನ್, ಚಂದ್ರಶೇಖರ, ಭಾಗವತ ಲಂಬೋದರ ಹೆಗಡೆ, ರೋಟರಿ ಅಧ್ಯಕ್ಷ ಶ್ಯಾಮ ಸುಂದರ ನಾಯರಿ, ಕಲಾವಿದ ನರಸಿಂಹ ತುಂಗ, ಯಕ್ಷದೇಗುಲದ ವ್ಯವಸ್ಥಾಪಕ ಸುದರ್ಶನ ಉರಾಳ ಇದ್ದರು.