ಬೆಂಗಳೂರು: `ಜಾಗತಿಕ ಮಟ್ಟದಲ್ಲಿ ಯಕ್ಷಗಾನಕ್ಕೆ ಕಲಾತ್ಮಕ ಮೌಲ್ಯವನ್ನು ಹೆಚ್ಚಿಸಿದ ಕೀರ್ತಿ ಶಿವರಾಮ ಕಾರಂತರಿಗೆ ಸಲ್ಲಬೇಕು~ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್. ಸಾಮಗ ಅಭಿಪ್ರಾಯಪಟ್ಟರು.
ಕರ್ನಾಟಕ ಕಲಾ ದರ್ಶನಿ ಸಂಸ್ಥೆಯು ಸೋಮವಾರ ಪುರಭವನದಲ್ಲಿ ಏರ್ಪಡಿಸಿದ್ದ ಡಾ.ಶಿವರಾಮ ಕಾರಂತ-ನೆನಪು, ಪ್ರಶಸ್ತಿ ಪ್ರದಾನ, ಪೌರಾಣಿಕ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
`ಡಾ.ಶಿವರಾಮ ಕಾರಂತರಿಗೆ ಅಭಿಮಾನಿಗಳು ರಾಜ್ಯದಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳದಲ್ಲಿಯೂ ಇದ್ದಾರೆ. ಕಾರಂತರು ಕರ್ನಾಟಕದಲ್ಲಿ ಸಾಹಿತ್ಯ ಮತ್ತು ಜಾನಪದ ಕಲೆಗಳಲ್ಲಿ ಅಪಾರ ಕೊಡುಗೆ ನೀಡಿದ್ದರೂ ಸಹ ಯಕ್ಷಗಾನ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆ ನೀಡಿದ್ದಾರೆ~ ಎಂದು ಹೇಳಿದರು.
`ಯಕ್ಷಗಾನ ಕಲೆಯನ್ನು ಪ್ರೀತಿಸಿದಷ್ಟು ಕಲಾವಿದರನ್ನು ಸಹ ಅಷ್ಟೇ ಪ್ರೋತ್ಸಾಹಿಸುತ್ತಿದ್ದರು. ಕಾರಂತರು ಯಕ್ಷಗಾನಕ್ಕೆ ಹೆಚ್ಚಿನ ಆಸಕ್ತಿ ವಹಿಸದಿದ್ದರೇ ಇಂದು ಸರ್ಕಾರ ಪ್ರತ್ಯೇಕವಾಗಿ ಯಕ್ಷಗಾನ ಅಕಾಡೆಮಿ ಸ್ಥಾಪಿಸಲು ಸಾಧ್ಯವಾಗುತ್ತಿರಲಿಲ್ಲ~ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರನ್ನು ಅಭಿನಂದಿಸಲಾಯಿತು. ಸಂಜೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, `ನಾವು ವೇಷ ಕಟ್ಟಿ ಆಡುವ ಒಂದು ಆಟವನ್ನು ನೋಡದ ಸರ್ಕಾರ ನೀಡುವ ಪ್ರಶಸ್ತಿಗಿಂತ, ಆಟವನ್ನು ನೋಡಿ ನಮಗೆ ಹುರಿದುಂಬಿಸಿ ನೀಡುವ ಜನರ ಭರವಸೆಯೇ ನಮಗೆ ಶ್ರೀರಕ್ಷೆ~ ಎಂದರು. ಪಾವಂಜೆ ಶಿವರಾಮ ಭಟ್ ಅವರಿಗೆ ಎಚ್.ಎಲ್. ಭಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.