ಶ್ರೀಕಂಠದತ್ತ ಒಡೆಯರ್ ಅವರ ಸಾವಿನ ಸಂದರ್ಭದಲ್ಲಿ ಅವರನ್ನು ‘ಯದು ವಂಶದ ಕೊನೆಯ ಕುಡಿ’ ಎಂದು ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಜಯಚಾಮರಾಜ ಒಡೆಯರ್ಗೆ ಶ್ರೀಕಂಠದತ್ತ ಅವರ ಜೊತೆಗೆ ಐವರು ಹೆಣ್ಣು ಮಕ್ಕಳೂ ಇದ್ದಾರೆ. ಇವರೂ ಯದು ವಂಶದ ಕುಡಿಗಳೇ. ಇವರನ್ನೆಲ್ಲ ನಿರ್ಲಕ್ಷಿಸಿ ಶ್ರೀಕಂಠದತ್ತ ಒಡೆಯರ್ ಅವರ ನಿಧನದಿಂದ ಯದು ವಂಶದ ಕೊನೆಯ ಕೊಂಡಿ ಕಳಚಿತೆಂದು ಪರಿಭಾವಿಸುವುದು ಲಿಂಗತಾರತಮ್ಯದ ಸ್ಪಷ್ಟ ನಿದರ್ಶನ. ಗಂಡು ಮಗು ಮಾತ್ರ ವಂಶೋದ್ಧಾರಕ; ಹೆಣ್ಣು ಮಕ್ಕಳು ಕೇವಲ ವಂಶವೃಕ್ಷದ ಟೊಂಗೆಗಳಾಗಿ ಉಳಿಯಬೇಕು ಎಂಬುದು ಈ ಆಧುನಿಕ ಯುಗದಲ್ಲೂ ಪ್ರಸ್ತುತವೇ?
ಹಾಗೆ ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರಾಧಿಕಾರಿ ಎಂಬುದು ರಾಜವಂಶಸ್ಥರೇ ಆಗಿರಲಿ, ಜನಸಾಮಾನ್ಯರೇ ಆಗಿರಲಿ ಅವರ ಕುಟುಂಬದ ಆಸ್ತಿಪಾಸ್ತಿಗೆ ಸಂಬಂಧಿಸಿದ್ದು. ಹಾಗಾಗಿ ಸಾರ್ವಜನಿಕವಾಗಿ ಈ ಬಗ್ಗೆ ಗಂಭೀರ ಚರ್ಚೆಗೆ ಕಾರಣವಿಲ್ಲ. ಆದರೆ ಸಾಮಾಜಿಕವಾಗಿ, ನೈತಿಕವಾಗಿ ಹಾಗೂ ಕಾನೂನಿನಡಿ ಸಮಾನ ಸ್ಥಾನಮಾನಕ್ಕೆ ಅರ್ಹಳಾದ ಮಹಿಳೆಯರನ್ನು ಮಾಧ್ಯಮಗಳಲ್ಲಿ ಕಡೆಗಣಿಸಿ ಲಿಂಗ ತಾರತಮ್ಯ ಮಾಡುವುದು ಎಷ್ಟು ಸರಿ?
ಅಲ್ಲದೇ ಅಲಮೇಲಮ್ಮನ ಶಾಪದಂತೆ ಯದು ವಂಶದ ರಾಜರಿಗೆ ಗಂಡು ಮಕ್ಕಳಾಗುವುದಿಲ್ಲ ಎಂಬುದು ಬಹು ದೊಡ್ಡ ಮೂಢನಂಬಿಕೆ. ಈ ಬಗ್ಗೆ ವೈದ್ಯಕೀಯ ವಿಶ್ಲೇಷಣೆ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ನಡೆಯಬೇಕಿದೆ.