ಸಿಂದಗಿ: ರದ್ದುಪಡಿಸಿದ ಪಡಿತರ ಚೀಟಿಗಳನ್ನು ಕೂಡಲೇ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಯಲಗೋಡ ಗ್ರಾಮಸ್ಥರು ಶುಕ್ರವಾರ ಸ್ಥಳೀಯ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಹುಯೋಗಿ ತಳ್ಳೊಳ್ಳಿ ಮಾತನಾಡಿ, ಯಲಗೋಡ ಗ್ರಾಮದ ದಲಿತ, ಹಿಂದುಳಿದ. ಅಲ್ಪಸಂಖ್ಯಾತರರ ನ್ನೊಳಗೊಂಡು ಕಡುಬಡವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದುಪಡಿಸುವ ಮೂಲಕ ತಹಶೀಲ್ದಾರ ಕಚೇರಿ ಬಡಜನರಿಗೆ ಭಾರಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಪಡಿತರ ಆಹಾರ ಧಾನ್ಯದ ಮೇಲೆ ಅವಲಂಬಿ ತಾಗಿರುವ ಗ್ರಾಮದ ಬಡಜನರು ಬದುಕು ನಿರ್ವಹಣೆ ತುಂಬಾ ದುಸ್ತರವಾಗಿದೆ. ಈ ಆಹಾರಧಾನ್ಯ ದೊರಕದಿದ್ದರೆ ಉಪವಾಸ ಅನಿವಾರ್ಯವಾಗುತ್ತದೆ ಎಂದು ವಿಷಾದಿಸಿದರು.
ಇಂಥ ಗಂಭೀರ ಪರಿಸ್ಥಿತಿಯನ್ನು ಅರಿತುಕೊಂಡು ಆಹಾರ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿಯೇ ಪಡಿತರ ಚೀಟಿ ವಿತರಣೆ ಮಾಡುವಂತೆ ಅವರು ಒತ್ತಾಯಿಸಿದರು.
ಆಹಾರ ಇಲಾಖೆ ಶಿರಸ್ತೇದಾರ ಇಂಗಳೆ ಮನವಿ ಪತ್ರ ಸ್ವೀಕರಿಸಿ, ಪಡಿತರ ಚೀಟಿ ಫಲಾನುಭವಿಗಳು ಮನೆ ಉತಾರ, ಹಳೇ ಕಾರ್ಡ್ ಝೆರಾಕ್ಸ್ ಪ್ರತಿಗಳನ್ನು ತಮಗೆ ನೀಡುವದರ ಜೊತೆಗೆ ಇನ್ನೊಮ್ಮೆ ಭಾವಚಿತ್ರ ತೆಗೆಯಿಸಿಕೊಳ್ಳುವಂತೆ ಸೂಚನೆ ನೀಡಿದರು.
ಮುತ್ತಿಗೆ ಪ್ರತಿಭಟನೆಯ ನೇತೃತ್ವ ವನ್ನು ಮಹಾಂತೇಶ ಚವ್ಹಾಣ, ರಜಾಕ್ ಕುರಿಕಾಯ, ಸಿದ್ದಪ್ಪ ಹಿರೇಕುರುಬರ, ಮುರ್ತುಜಾ ಕುರಿಕಾಯ, ಎ.ಜಿ. ಇಂಗಳಗಿ, ರೇವಣಸಿದ್ದಪ್ಪ ನಾಟೀಕಾರ, ಎಸ್.ಬಿ. ಕಕ್ಕೇರಿ, ಚಾಂದಪಟೇಲ ಕಣಮೇಶ್ವರ, ಯಮನಪ್ಪ ನಾಟೀಕಾರ, ಎ.ಎಚ್. ಬುಕ್ಕದ, ಸಂಗಪ್ಪ ಕೋಣಿನ, ರಾಮಪ್ಪ ಮಾದರ ವಹಿಸಿದ್ದರು. ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.