ಸವದತ್ತಿ: ಪುಣ್ಯಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಭಾರತ ಹುಣ್ಣಿಮೆ ದಿನವಾದ ಮಂಗಳವಾರ ಲಕ್ಷಾಂತರ ಭಕ್ತರು ರೇಣುಕಾ ದೇವಿ ದರ್ಶನ ಪಡೆದರು.
ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಭಕ್ತರ ಮಹಾಪೂರವೇ ಯಲ್ಲಮ್ಮನ ಸನ್ನಿಧಿಗೆ ಹರಿದು ಬಂದಿತ್ತು. ಭಕ್ತರಿಂದ ಹೊರಹೊಮ್ಮಿದ `ಉಧೋ ಉಧೋ ಯಲಮ್ಮ...~ ಎಂಬ ಉದ್ಘೋಷ ಮುಗಿಲು ಮುಟ್ಟಿತ್ತು.
ದೇವಸ್ಥಾನದ ಪ್ರಾಂಗಣದ ಸುತ್ತ ಯಲ್ಲಮ್ಮನ ಸ್ತುತಿ ಮಾಡಿದ ಭಕ್ತರು, ಕುಣಿಯುತ್ತ ಭಂಡಾರ, ಅರಿಶಿಣ ಎರಚಿದರು. `ಎಣ್ಣೆ ಹೊಂಡ~ದಲ್ಲಿ ಸ್ನಾನ ಮಾಡಿದ ಹಲವು ಭಕ್ತರು ದೇವಾಲಯದ ಪ್ರಾಂಗಣದ ಸುತ್ತ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ದೇವಿಯ ಹಡ್ಡಲಗಿ (ಮಡಿಲು) ತುಂಬಿದರು.
ಸಂಜೆಯವರೆಗೂ ಭಕ್ತ ಸಾಗರ ಯಲ್ಲಮ್ಮನ ಸನ್ನಿಧಿಗೆ ಹರಿದು ಬರುತ್ತಿತ್ತು.
ಏಪ್ರಿಲ್ 6ರಂದು ನಡೆಯುವ ದವನದ ಹುಣ್ಣಿಮೆಯವರೆಗೂ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯಲಿದ್ದಾರೆ.