ಮಂಗಳೂರು:`ಕಾರವಾರ- ಬೆಂಗಳೂರು ನಡುವೆ ಶೀಘ್ರ ಪೂರ್ಣ ಪ್ರಮಾಣದ ರೈಲು ಸಂಚಾರ ಆರಂಭಿಸಲಾಗುವುದು~ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಕಾರವಾರಕ್ಕೆ ವಿಸ್ತರಣೆಗೊಂಡಿರುವ ಯಶವಂತಪುರ- ಕಣ್ಣೂರು ರೈಲಿನ 13 ಬೋಗಿಗಳಿಗೆ ಹಸಿರು ನಿಶಾನೆ ತೋರುವ ಸಲುವಾಗಿ ಮಂಗಳೂರು ಕೇಂದ್ರೀಯ ರೈಲು ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ರೈಲ್ವೆ ಇಲಾಖೆ ಕಾರವಾರ ಹಾಗೂ ಕಣ್ಣೂರು ಪಾಲಿಗೆ ಎರಡು ಕಣ್ಣುಗಳಿದ್ದಂತೆ. ಎರಡೂ ನಗರಗಳನ್ನು ಇಲಾಖೆ ಸಮಾನವಾಗಿ ನೋಡುತ್ತದೆ. ಎರಡೂ ನಗರಗಳಿಗೂ ಪ್ರತ್ಯೇಕ ರೈಲು ಸೇವೆ ಒದಗಿಸಲಾಗುವುದು. ತಿರುನಲ್ವೇಲಿ- ದಾದರ್ ನಡುವೆ ಶೀಘ್ರವೇ ಹೊಸ ರೈಲು ಯಾನ ಆರಂಭವಾಗಲಿದೆ~ ಎಂದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಂಗಳೂರು ನಿಲ್ದಾಣದಿಂದ ಮೊದಲ ಬಾರಿಗೆ ಕಾರವಾರಕ್ಕೆ ಪ್ರಯಾಣ ಬೆಳೆಸಿದ ರೈಲಿಗೆ ಹಸಿರು ನಿಶಾನೆ ತೋರಿದರು.
ಸಡಗರದ ಸ್ವಾಗತ:ಬೆಂಗಳೂರಿನಿಂದ ಬಂದ ರೈಲಿನ 13 ಬೋಗಿಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಂಗರಿಸಿ ಕಾರವಾರಕ್ಕೆ ಕಳುಹಿಸಿಕೊಡಲಾಯಿತು. ಕರಾವಳಿಯುದ್ದಕ್ಕೂ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ಥಳೀಯರು ರೈಲನ್ನು ಸಡಗರದಿಂದ ಸ್ವಾಗತಿಸಿದರು.