ಧಾರವಾಡ: ಅಧ್ಯಯನ ಹಾಗೂ ಸಾಮಾನ್ಯ ಜ್ಞಾನ ಅರಿತಲ್ಲಿ ಪ್ರತಿ ವಿದ್ಯಾರ್ಥಿಯೂ ಯಶಸ್ವಿ ವಕೀಲರಾಗಲು ಸಾಧ್ಯ ಎಂದು ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿವಿ ಪ್ರಾಧ್ಯಾಪಕ ಜಿ.ವಿ. ಅಜ್ಜಪ್ಪ ಹೇಳಿದರು.
ಆಲೂರು ವೆಂಕಟರಾವ್ ಸ್ಮಾರಕ ಭವನದಲ್ಲಿ ಶನಿವಾರ ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಕಾಲೇಜು ವತಿಯಿಂದ ಆಯೋಜಿಸಿದ್ದ ಎಸ್.ಸಿ. ಜವಳಿ ಸ್ಮಾರಕ 14ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ದೊರೆಯಲಿದೆ. ಸರಕಾರಿ ಮತ್ತು ಖಾಸಗಿ ಕಾನೂನು ಕಾಲೇಜುಗಳು ಈ ಬಗ್ಗೆ ಹೆಚ್ಚು ಗಮನ ನೀಡಬೇಕು. ಇಂತಹ ಸ್ಪರ್ಧೆಗಳನ್ನು ಹೆಚ್ಚೆಚ್ಚು ಆಯೋಜಿಸಬೇಕು ಎಂದು ತಿಳಿಸಿದರು.
ಕರ್ನಾಟಕ ವಿವಿ ಕಾನೂನು ವಿಭಾಗದ ಡೀನ್ ಡಾ. ಸಿ. ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷ ಎ.ಎ. ಮಗದುಮ್, ಹೈಕೋರ್ಟ್ ನ್ಯಾಯಮೂರ್ತಿ ಸುಭಾಸ ಅಡಿ, ಸುಪ್ರಿಂ ಕೋರ್ಟ್ ನ್ಯಾಯವಾದಿ ಶರತ ಜವಳಿ ಹಾಗೂ ಇತರರು ಪಾಲ್ಗೊಂಡಿದ್ದರು.
ಪ್ರಾಚಾರ್ಯ ಡಾ. ಸಿ.ಎಸ್. ಪಾಟೀಲ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಸಿ. ಮಾಳಗಿ ಪರಿಚಯಿಸಿದರು. ಪ್ರೊ. ಉಷಾ ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ರತ್ನಾ ಭರಮಗೌಡರ ಪರಿಚಯಿಸಿದರು. ಸಚಿನ್ ಅಂಗಡಿ ನಿರೂಪಿಸಿ, ವಿದ್ಯಾಲಕ್ಷ್ಮಿ ಭಟ್ ವಂದಿಸಿದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ, ಕೇರಳ, ಒರಿಸ್ಸಾ, ಛತ್ತೀಸಗಡ ಮೊದಲಾದ ರಾಜ್ಯಗಳ 50ಕ್ಕೂ ಹೆಚ್ಚು ಕಾನೂನು ಕಾಲೇಜು ತಂಡಗಳು ಪಾಲ್ಗೊಂಡಿವೆ.