`ಅಂದು ವೀರ್ಝಾರಾ ಚಿತ್ರ ನೋಡುತ್ತಿದ್ದೆ. ಅದರಲ್ಲೊಂದು ದೃಶ್ಯವಿದೆ. ಪ್ರೀತಿ ಜಿಂಟಾಳನ್ನು ಸೇತುವೆಯ ಮೇಲೆ ಶಾರುಖ್ ಖಾನ್ ಹೊತ್ತು ನಡೆಯುವುದು... ಪ್ರೀತಿಯ ಕಂಗಳಲ್ಲಿ ಪ್ರೀತಿ ಹೊನಲಾಗಿ ಹರಿಯುತ್ತಿದೆ.
ಅಷ್ಟೇ ಭರವಸೆ ಶಾರುಖ್ ಕಂಗಳಲ್ಲಿ ಹೊಳೆಯುತ್ತಿದೆ. ಅದೇ ನಿಜವಾದ ರೊಮ್ಯಾನ್ಸ್. ಆಗಲೇ ಅಂದುಕೊಂಡಿದ್ದೆ... ಇಂಥದ್ದೊಂದು ಪಾತ್ರ ಮಾಡಬೇಕು. ಯಶ್ಜೀ ಜೊತೆ ಕೆಲಸ ಮಾಡಬೇಕು ಎಂದು...~ ಕತ್ರಿನಾ ಮುಂಬೈನಲ್ಲಿ ಹೀಗೆ ಹೇಳಿಕೊಂಡಿದ್ದಾರೆ.
ಜಬ್ ತಕ್ ಹೈ ಜಾನ್ ಚಿತ್ರದಿಂದಾಗಿ ಆ ಕನಸು ನನಸಾಗಿದೆ. ಆದರೆ ಖುಷಿಯ ಬದಲು ಒಂದು ಬಗೆಯ ನಿರಾಶೆಯೂ ಮನೆ ಮಾಡಿದೆ. ಯಶ್ಜೀ ನಿವೃತ್ತಿ ಘೋಷಿಸಬಾರದು. ನಿರ್ದೇಶಕರಾಗಿ ಅವರು ಮುಂದುವರಿಯಲೇಬೇಕು. ಪ್ರೀತಿ ಪ್ರೇಮವನ್ನು ಕಣ್ಣಲ್ಲೇ ಸ್ಫುರಿಸುವ ಆ ಪರಿಯೇ ಹೊಸತು~ ಎಂದೆಲ್ಲ ಕತ್ರಿನಾ ಪ್ರೀತಿಯ ಪರಿಯ ಬಗ್ಗೆಯೇ ಮಾತನಾಡಿದ್ದಾರೆ.
`ಜಬ್ ತಕ್ ಹೈ ಜಾನ್~ ಚಿತ್ರೀಕರಣದ ವೇಳೆ ಒಮ್ಮೆ ಕತ್ರಿನಾಗೆ ನಟಿಸಲು ಆಗುತ್ತಲೇ ಇರಲಿಲ್ಲವಂತೆ. ಆದಿತ್ಯ ಚೋಪ್ರಾ ಹಾಗೂ ಶಾರುಖ್ ಇಬ್ಬರೂ ದೃಶ್ಯವನ್ನು ವಿವರಿಸಿ ಹೇಳಿದರೂ ಕತ್ರಿನಾಗೆ ಕಷ್ಟ, ನಟಿಸುವುದು ಅಸಾಧ್ಯ ಎನಿಸಿತ್ತಂತೆ. ಆಗ ಚೋಪ್ರಾ ನನ್ನ ಬಳಿ ಬಂದು ದೃಶ್ಯದ ಬಗ್ಗೆ ಏನೊಂದೂ ಮಾತಾಡಲಿಲ್ಲ. ನನ್ನೊಂದಿಗೆ ಕುಳಿತು ಹರಟಿದರು. ನಗಿಸಿದರು. ನನ್ನಿಂದಾಗದು ಎಂಬುದನ್ನೇ ಮರೆತಿದ್ದೆ.
ಆ ಕ್ಷಣ ನನ್ನ ಮನಸಿನಲ್ಲಿದ್ದ ಒತ್ತಡವನ್ನು ಅವರು ಅರ್ಥ ಮಾಡಿಕೊಂಡಿದ್ದರು. ಮನಸು ಹಗುರವಾಯಿತು. ನಂತರ ಹೇಗೆ ನಟಿಸಬಹುದು ಎಂಬುದನ್ನು ಒಂದೆರಡೇ ಸಾಲಿನಲ್ಲಿ ಹೇಳಿದರು. ಮುಂದಿನ ಕ್ಷಣ ಕ್ಯಾಮೆರಾ ಮುಂದಿದ್ದೆ. ಶಾಟ್ ಓಕೆಯಾಗಿತ್ತು..~ ಎಂದು ಕತ್ರಿನಾ ನೆನಪಿಸಿಕೊಂಡಿದ್ದಾರೆ.
`ಇಂಥ ಸಹೃದಯ ನಿರ್ದೇಶಕರೊಂದಿಗೆ ಕೆಲಸ ಮಾಡುವುದೇ ಗೌರವವಾಗಿದೆ. ಕೊನೆಯ ಚಿತ್ರದಲ್ಲಿ ಅವರೊಂದಿಗೆ ಇದ್ದುದಕ್ಕೆ ಸಂತೋಷವಿದೆ. ಇದು ಕೊನೆಯ ಚಿತ್ರವಾಗದಿರಲಿ ಎಂಬ ಪ್ರಾರ್ಥನೆಯೂ ಇದೆ. ಇಂಥ ಅನುಭವ ಎಲ್ಲರಿಗೂ ದೊರೆಯಬೇಕು. ಯಶ್ಜೀ ತಮ್ಮ ನಿರ್ಧಾರ ಹಿಂದಕ್ಕೆ ಪಡೆಯಬೇಕು~ ಎಂದಿದ್ದಾರೆ.