ವಾರಣಾಸಿ, (ಪಿಟಿಐ): `ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದಿಂದ ಬೇಸತ್ತ ಜನರಲ್ಲಿ ಆತ್ಮವಿಶ್ವಾಸ ತುಂಬುವ ಏಕೈಕ ಉದ್ದೇಶದಿಂದ ರಥಯಾತ್ರೆ ಆರಂಭಿಸಿದ್ದೇನೆ ಹೊರತು ನನ್ನನ್ನು ನಾನು ಬಿಂಬಿಸಿಕೊಳ್ಳಲು ಅಲ್ಲ~ ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
`ಈ ಯಾತ್ರೆಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಅಥವಾ ವೈಯಕ್ತಿಕ ಹಿತಾಸಕ್ತಿ ಅಡಗಿಲ್ಲ. ವೈಯಕ್ತಿಕವಾಗಿ ನನಗೂ ಮತ್ತು ನನ್ನ ಪಕ್ಷಕ್ಕೂ ಇದರಿಂದ ಆಗಬೇಕಾದದ್ದು ಏನೂ ಇಲ್ಲ~ ಎಂದು ಗುರುವಾರ ನಡೆದ ಜನ ಚೇತನ ಯಾತ್ರೆಯ ಮೂರನೇ ದಿನದ ರ್ಯಾಲಿಯಲ್ಲಿ ಅವರು ಹೇಳಿದರು.
`2ಜಿ ತರಂಗಾಂತರ ಹಂಚಿಕೆ, ಕಾಮನ್ವೆಲ್ತ್ ಕ್ರೀಡಾಕೂಟ ಹಗರಣಗಳಿಂದ ದೇಶದ ಜನ ಭ್ರಮನಿರಸನಗೊಂಡಿದ್ದಾರೆ. ಅವರಲ್ಲಿ ಮತ್ತೆ ಆತ್ಮಸ್ಥೈರ್ಯ ತುಂಬುವುದಷ್ಟೇ ಯಾತ್ರೆಯ ಉದ್ದೇಶ~ ಎಂದು ಅವರು ಸ್ಪಷ್ಟಪಡಿಸಿದರು.
ಇಂದು ಕೂಡ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರಿಸಿದ ಅಡ್ವಾಣಿ, ಭ್ರಷ್ಟಚಾರ ತಡೆಯಲು ಕೇಂದ್ರ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು. ಯಾವುದೇ ಹಗರಣ ಬೆಳಕಿಗೆ ಬಂದಿದ್ದರೂ ಅದು ಮಹಾಲೇಖಪಾಲರು ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪ್ರಯತ್ನದಿಂದಾಗಿಯೇ ಹೊರತು ಸರ್ಕಾರದಿಂದಲ್ಲ ಎಂದರು.
ಇದೇ ವೇಳೆ, ಬಿಜೆಪಿಯ ಮತ್ತೊಬ್ಬ ನಾಯಕ ಕಲ್ರಾಜ್ ಮಿಶ್ರ ಅವರ ಜನ ಸ್ವಾಭಿಮಾನ ಯಾತ್ರೆಗೆ ಅವರು ಚಾಲನೆ ನೀಡಿದರು. ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸೂರ್ಯ ಪ್ರತಾಪ್ ಶಾಹಿ ಮಾತನಾಡಿದರು.