ಯಾದಗಿರಿ: ಬರಿದಾಗಿದ್ದ ಭೀಮಾ ನದಿ ಇದೀಗ ಮೈದುಂಬಿದೆ. ನಗರದ ಪಕ್ಕದಲ್ಲಿಯೇ ಹರಿಯುವ ಭೀಮಾನದಿಯಲ್ಲಿ ಭಾನುವಾರ ಹೆಚ್ಚಿನ ಪ್ರಮಾಣದ ನೀರು ಕಂಡು ಬಂದಿದೆ. ಕೃಷ್ಣಾ ನದಿಯ ತೀರದಲ್ಲಿ ಪ್ರವಾಹದ ಸ್ಥಿತಿ ಇದ್ದರೂ, ಭೀಮಾ ನದಿ ಮಾತ್ರ ಬರಿದಾಗಿತ್ತು. ಭೀಮಾ ತೀರದ ರೈತರು ನೀರಿಗಾಗಿ ಪರದಾಡುವಂತಾಗಿತ್ತು.
ಇದೀಗ ಭೀಮಾ ನದಿಯಲ್ಲೂ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ. ಭೀಮಾ ತೀರದ ರೈತರು ಕೃಷಿ ಚಟುವಟಿಕೆಯಲ್ಲಿ ಸಂತಸದಿಂದ ತೊಡಗಿದ್ದು, ಕೃಷಿ ಚಟುವಟಿಕೆ ಚುರುಕು ಪಡೆದಿದೆ. ಭಾನುವಾರ ನದಿಯಲ್ಲಿ ನೀರು ಬಂದಿರುವುದರಿಂದ ನದಿಯಲ್ಲಿ ಮೀನುಗಾರರ ಸಂಖ್ಯೆಯೂ ಹೆಚ್ಚಾಗಿತ್ತು.
ಕಳೆದ ಕೆಲ ದಿನಗಳಿಂದ ಮೀನು ಸಿಗದೇ ತೊಂದರೆ ಅನುಭವಿಸುತ್ತಿದ್ದ ಮೀನುಗಾರರು, ಭಾನುವಾರ ನದಿ ತೀರದಲ್ಲಿ ಮೀನು ಹಿಡಿಯುವಲ್ಲಿ ನಿರತರಾಗಿದ್ದರು.