ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ ತುಂಬಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಪ್ರವಾಸಿಗರು ತಂಡೋಪತಂಡವಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಎತ್ತ ನೋಡಿದರೂ ನೀರೇ ಕಾಣುತ್ತಿದ್ದು, ನಿಸರ್ಗ ಸೌಂದರ್ಯ ಆಕರ್ಷಣೆಯ ಕೇಂದ್ರವಾಗಿದೆ.
ಜಲಾಶಯ ಮುಂಭಾಗದಲ್ಲಿ ಬೃಹತ್ ಉದ್ಯಾನ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ವಿವಿಧ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಚಿಕ್ಕಮಕ್ಕಳು ಆಟವಾಡಲು ಸುಂದರ ಸ್ಥಳವಾಗಿದೆ.
ಈ ಜಲಾಶಯದ ನೀರನ್ನು ಬಲದಂಡೆ ಕಾಲುವೆ ಮೂಲಕ ರಾಯಚೂರ ಜಿಲ್ಲೆಯ ಲಿಂಗಸೂಗುರ, ದೇವದುರ್ಗ, ರಾಯಚೂರ ಹಾಗೂ ಎಡದಂಡೆಯ ಮೂಲಕ ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ಗುಲ್ಬರ್ಗ ಜಿಲ್ಲೆಯ ಜೇವರ್ಗಿ, ವಿಜಾಪುರ ಜಿಲ್ಲೆಯ ಸಿಂದಗಿ, ಇಂಡಿ ತಾಲ್ಲೂಕಿನ ಸಾವಿರಾರು ಎಕರೆ ಜಮೀನಿಗೆ ಹರಿಸಲಾಗುತ್ತಿದೆ.
31 ಟಿಎಂಸಿ ನೀರು: ಜಲಾಶಯ ಒಟ್ಟು 492.25 ಮಿಟರ್ ಎತ್ತರವಿದ್ದು, 491.760 ಮೀಟರ್ ನೀರು ಸಂಗ್ರಹವಾಗಿದೆ. 33.3 ಟಿಎಂಸಿ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯದಲ್ಲಿ ಗುರುವಾರ 31.054 ಟಿಎಂಸಿ ನೀರು ಸಂಗ್ರಹವಿದೆ ಎಂದು ಕೆಬಿಜೆಎನ್ಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಶ್ವನಾಥ ತಿಳಿಸಿದ್ದಾರೆ.
ಜಲಾಶಯಕ್ಕೆ 4,955 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಎಡದಂಡೆ ಕಾಲುವೆಗೆ 1,500 ಕ್ಯೂಸೆಕ್ ಹಾಗೂ ಬಲದಂಡೆ ಕಾಲುವೆಗೆ 100 ಕ್ಯೂಸೆಕ್ ನೀರು ಬಿಡಲಾಗಿದೆ.
ಇಲ್ಲಿಯವರೆಗೆ ನದಿಯ ಮೂಲಕ 2,135 ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದ್ದು, ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಗೇಟ್ಗಳ ಮೂಲಕ ನೀರನ್ನು ಹೊರಬಿಡಲಾಗುವುದು ಎಂದರು.