ಬೆಳಗಾವಿ: ರೈತರ ಬಗೆಗೆ ಇರುವ ಸರ್ಕಾರದ ನೀತಿ ಹಾಗೂ ಆಧುನಿಕ ಕೃಷಿ ಪದ್ಧತಿಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಭಾರತ ಕೃಷಿಕ ಸಮಾಜ ಅಧ್ಯಕ್ಷ ಅಜಯವೀರ ಜಾಖಡ ಅಭಿಪ್ರಾಯಪಟ್ಟರು.
ಭಾರತ ಕೃಷಿಕ ಸಮಾಜ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ರೈತರ ಸಮಾವೇಶ~ದಲ್ಲಿ ಮಾತನಾಡಿದ ಅವರು, ರೈತರ ಪರವಾಗಿ ದೇಶದ ಯಾವುದೇ ಪಕ್ಷ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸಿದರು.
`ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿಕರ ಪಾತ್ರ ಮಹತ್ವ ದ್ದಾಗಿದೆ. ಸರ್ಕಾರ ತಪ್ಪು ಮಾಡಿದೆ ಎಂದು ಆರೋಪಿಸುವು ದಕ್ಕಿಂತ ನಾವು ಎಲ್ಲಿ ತಪ್ಪಿದ್ದೇವೆ ಎಂದು ಚಿಂತಿಸಬೇಕಿದೆ. ರೈತರು ಒಗ್ಗಟ್ಟಿನಿಂದ ಹೋರಾಟ ಮಾಡದ ಹೊರತು ನ್ಯಾಯ ಸಿಗುವುದಿಲ್ಲ~ ಎಂದು ಅವರು ಹೇಳಿದರು.
`ಸಾಕಷ್ಟು ಸಂಖ್ಯೆಯ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರಿಗೆ ಸಂಘಟನೆಗಳಲ್ಲಿ ಅವಕಾಶ ನೀಡದೇ ನಿರ್ಲಕ್ಷಿಸಲಾಗಿದೆ. ರೈತರ ಹೆಸರಿನಲ್ಲಿ ಲಕ್ಷಾಂತರ ಸಂಘಟನೆಗಳು ಹುಟ್ಟಿಕೊಂಡಿದ್ದು, ರೈತರ ಹೆಸರಿನಲ್ಲಿ ಸ್ವಲಾಭ ಪಡೆಯುವ ಸಂಘಟನೆಗಳ ಬಗೆಗೆ ಎಚ್ಚರದಿಂದ ಇರಬೇಕು~ ಎಂದು ಅವರು ಸಲಹೆ ಮಾಡಿದರು.
`ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಯಿಂದ ರೈತರಿಗೆ ಹೊಲದಲ್ಲಿ ಕೆಲಸ ಮಾಡಲು ಕಾರ್ಮಿಕರು ದೊರೆಯುತ್ತಿಲ್ಲ. ರೈತರ ಚಟುವಟಿಕೆಯ ದಿನಗಳನ್ನು ಹೊರತುಪಡಿಸಿ ಉಳಿದ ದಿನ ಕೆಲಸ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ~ ಎಂದು ಹೇಳಿದರು.
ಕೇಂದ್ರದ ಮಾಜಿ ಸಚಿವ ಡಾ.ಬಲರಾಮ್ ಜಾಖಡ ಮಾತನಾಡಿ, ರೈತರು ಉಳಿದರೆ ಮಾತ್ರ ದೇಶ ಉಳಿಯುತ್ತದೆ. ರೈತರ ಅಭಿವೃದ್ಧಿಗೆ ಶ್ರಮಿಸುವಂತೆ ಸರ್ಕಾರಗಳ ಮೇಲೆ ಒತ್ತಡ ತರಲಾಗುವುದು ಎಂದರು.
ಹರಿಯಾಣ ಸರ್ಕಾರದ ಲೋಕೋಪಯೋಗಿ ಸಚಿವ ಪ್ರಹ್ಲಾದ ಸಿಂಗ್ ಮಾತನಾಡಿ, ಕೃಷಿಕರು ಜಾಗೃತರಾಗಬೇಕು. ಸಂಘಟಿತರಾಗಬೇಕು ಎಂದರು.
ರೈತ ಮುಖಂಡ ರುದ್ರಪ್ಪ ಮೊಕಾಶಿ ಮಾತನಾಡಿ, ಎಲ್ಲ ಸರ್ಕಾರಗಳು ಹಳ್ಳಿಗಳನ್ನು ನಾಶ ಮಾಡಿ ನಗರ ಬೆಳೆಸುತ್ತಿವೆ. ರೈತರನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ರಾಜಕಾರಣಿಗಳಿಲ್ಲ ಎಂದು ಟೀಕಿಸಿದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕೃಷಿಕ ಸಮಾಜದ ಉಪಾಧ್ಯಕ್ಷ ಸಿದ್ರಾಮಪ್ಪ ದಂಗಾಪೂರ, ರಾಜ್ಯ ಘಟಕದ ಅಧ್ಯಕ್ಷ ಎನ್. ರಾಜಕುಮಾರಸಿಂಗ್ ಹಜಾರೆ, ಕರ್ನಾಟಕ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಫ್. ಡೊಡ್ಡಗವಡ್ರ, ಬಾಳಪ್ಪ ಬೆಳಕೂಡ, ರುದ್ರಪ್ಪ ಮೊಕಾಶಿ, ಎಸ್.ಕೆ. ಗರಗ, ಲೋಕಪ್ರಕಾಶ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.