ಚೆನ್ನೈ (ಪಿಟಿಐ): 2-ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಅಲ್ಲಗಳೆದಿರುವ ಡಿಎಂಕೆ ಪಕ್ಷದ ವಾಹಿನಿ ಕಲೈಞ್ಞರ್, ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗಳು ತನ್ನ ದಾಖಲೆಗಳನ್ನು ಪರಿಶೀಲನೆ ನಡೆಸುವುದನ್ನು ಸ್ವಾಗತಿಸುವುದಾಗಿ ಹೇಳಿದೆ.
‘2007-08ರಲ್ಲಿ ನಡೆದ 2ಜಿ- ತರಂಗಾಂತರ ಹಂಚಿಕೆಗೂ ನಮಗೂ ಯಾವುದೇ ನಂಟು ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಆದರೆ ಸಾಲ ವಹಿವಾಟು ಕಲೈಞ್ಞರ್ ಟಿವಿ ವಾಹಿನಿ ಮತ್ತು ಸಿನೆಯುಂಗ್ ಫಿಲ್ಮಂಸ್ ಪ್ರೈವೇಟ್ ಲಿಮಿಟೆಡ್ ನಡುವೆ 2009ರಲ್ಲಿ ಆಗಿದೆ. ಅಲ್ಲದೆ ಈ ಬಗ್ಗೆ ಸಿಬಿಐ ಕೋರ್ಟ್ಗೆ ಸಲ್ಲಿಸಿರುವ ತನ್ನ ವರದಿಯಲ್ಲಿಯೂ ಇದನ್ನು ನಮೂದಿಸಿದೆ’ ಎಂದು ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ತಿಳಿಸಿದ್ದಾರೆ.
ಸ್ವಾನ್ ಟೆಲಿಕಾಮ್ನ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ ಮತ್ತು ವಾಹಿನಿ ನಡುವೆ ಸಂಪರ್ಕ ಇದೆ. ಅಂದಿನ ದೂರಸಂಪರ್ಕ ಸಚಿವ ಎ.ರಾಜಾ ಅವರು ಬಲ್ವಾ ಅವರಿಗೆ ಅಕ್ರಮವಾಗಿ ಅನುಕೂಲ ಕಲ್ಪಿಸಲು ಯುಎಎಸ್ ಪರವಾನಗಿ ಮತ್ತು ಅಪರೂಪದ ರೇಡಿಯೋ ತರಂಗಗಳನ್ನು ಮಂಜೂರು ಮಾಡಿದ್ದರು ಎಂದು ದೆಹಲಿ ನ್ಯಾಯಾಲಯದಲ್ಲಿ ಸಿಬಿಐ ಸಲ್ಲಿಸಿರುವ ಮಾಹಿತಿಯಲ್ಲಿ ಆರೋಪ ಮಾಡಿದೆ.