ಬೆಂಗಳೂರು: `ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರರಿಗೆ ದೇವರು ಉತ್ತಮ ಆರೋಗ್ಯ ಕರುಣಿಸಲಿ. ಏಕೆಂದರೆ ಉತ್ತಮ ಆರೋಗ್ಯವಿದ್ದರೆ ಅವರು ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಬಹುದಾಗಿದೆ~ ಎಂದು ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಲೇವಡಿ ಮಾಡಿದರು.
`ರಾಜ್ಯದಲ್ಲಿ ಅರಣ್ಯ ಸಂಪತ್ತು ನಾಶವಾಗಿದೆ. ಪರಿಣಾಮವಾಗಿ ರಾಜ್ಯ ಹೀನಾಯ ಸ್ಥಿತಿ ತಲುಪಿದೆ. ಇದರಿಂದ ನೋವಾಗುವ ಜತೆಗೆ ಆಕ್ರೋಶವೂ ಉಂಟಾಗುತ್ತದೆ. ಹಾಗಾಗಿ ಸಂಪತ್ತು ಲೂಟಿ ಮಾಡಿದ ರೆಡ್ಡಿ ಸಹೋದರು ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸುವಂತಾಗಲಿ~ ಎಂದರು.
ಪ್ರೊ. ಹಂಪ ನಾಗರಾಜಯ್ಯ ಅವರ 100ನೇ ಕೃತಿ `ಕುವೆಂಪು ವಿಗ್ನೆಟ್ಸ್ ಆಫ್ ಮ್ಯಾನ್ ಅಂಡ್ ಮಿಷನ್~ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಜರ್ಮನಿಯ ವುರ್ಲ್ಸ್ಬರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎ. ವಿವೇಕ ರೈ, `ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದಿದ್ದರೂ ಕನ್ನಡದ ಲೇಖಕರ ಬಗ್ಗೆ ಮಾಹಿತಿ ನೀಡುವ ವೆಬ್ಸೈಟ್ಗಳು ಇಲ್ಲದಿರುವುದು ದುರದೃಷ್ಟಕರ.
ಹಾಗಾಗಿ ಕನ್ನಡದ ಶ್ರೇಷ್ಠ ಸಾಹಿತಿಗಳ ವಿವರಗಳನ್ನೊಳಗೊಂಡ ವೆಬ್ಸೈಟ್ ಆರಂಭಿಸಬೇಕು~ ಎಂದರು.ಅಕ್ಷರ ಪ್ರಿಂಟರ್ಸ್ ಪಬ್ಲಿಷರ್ಸ್ ಮಾಲೀಕ ಆರ್. ನಾಗರಾಜ್ ಉಪಸ್ಥಿತರಿದ್ದರು. ಕೃತಿಯ ಬೆಲೆ ರೂ 250.