ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಬೋಧಕರಿಗೆ ನೀಡಿರುವಂತೆ ಬೋಧಕೇತರ ಸಿಬ್ಬಂದಿಗೂ ಯುಜಿಸಿ ವೇತನ ಶ್ರೇಣಿ ನೀಡಬೇಕು ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟ ಆಗ್ರಹಿಸಿದೆ.
`ಎಲ್ಲ ವಿ.ವಿ.ಗಳ ಶಿಕ್ಷಕೇತರ ನೌಕರರಿಗೆ ಒಂದೇ ರೂಪದ ವೇತನ ಮತ್ತು ಸೇವಾ ನಿಯಮಾವಳಿಗಳನ್ನು ರಚಿಸಬೇಕು. ವಿ.ವಿ ತಾಂತ್ರಿಕ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಬಡ್ತಿ ಅವಕಾಶಗಳನ್ನು ಕಲ್ಪಿಸಬೇಕು. ವಿ.ವಿ.ಗಳಲ್ಲಿರುವ ಎಲ್ಲ ದಿನಗೂಲಿ/ ಮಾಸಿಕ ವೇತನದ ನೌಕರರನ್ನು ಕೂಡಲೇ ಕಾಯಂಗೊಳಿಸಬೇಕು. ಗುತ್ತಿಗೆ ಆಧಾರಿತ ನೌಕರರಿಗೆ ಸಂಚಿತ ವೇತನ ನೀಡಬೇಕು~ ಎಂದು ಒಕ್ಕೂಟದ ಅಧ್ಯಕ್ಷ ಶಂಕರ್ ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ವಿಜಯರಾಜ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
`ಕುಲಸಚಿವರ (ಆಡಳಿತ ಮತ್ತು ಮೌಲ್ಯಮಾಪನ) ಹುದ್ದೆಗಳಿಗೆ ಶಿಕ್ಷಕರ ಬದಲು ಕೆಎಎಸ್ ಅಥವಾ ಐಐಎಎಸ್ ಅಧಿಕಾರಿಗಳನ್ನು ನೇಮಿಸಬೇಕು. ಶಿಕ್ಷಕೇತರ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಬಾರದು. ನಿಯೋಜನೆ ಆಧಾರದಲ್ಲಿ ಬಂದಿರುವ ಎಲ್ಲ ಶಿಕ್ಷಕರು ಮತ್ತು ಇತರ ಇಲಾಖೆಗಳ ಅಧಿಕಾರಿಗಳನ್ನು ಕೂಡಲೇ ಅವರವರ ಮಾತೃ ಇಲಾಖೆಗೆ ವಾಪಸ್ ಕಳುಹಿಸಬೇಕು. ಸಿಂಡಿಕೇಟ್ ಮತ್ತು ಶೈಕ್ಷಣಿಕ ಪರಿಷತ್ತುಗಳಲ್ಲಿ ಬೋಧಕೇತರ ನೌಕರರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು~ ಎಂದು ಆಗ್ರಹಿಸಿದರು.
ವಿ.ವಿ.ಗಳ ಜಮೀನನ್ನು ಬೇರೆ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.