ಮಂಗಳೂರು: `ಯುಡಿಆರ್ಎಸ್ (ಅಂಪೈರ್ ತೀರ್ಪು ಪರೀಶಿಲನಾ ಪದ್ಧತಿ) ಅನ್ನು ಪೂರ್ಣವಾಗಿ ಬೆಂಬಲಿಸುತ್ತೇನೆ. ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡೆಯಲ್ಲಿ ತಂತ್ರಜ್ಞಾನ ಬಳಸಲೇಬೇಕು~ ಎನ್ನುತ್ತಾರೆ ಶ್ರೀಲಂಕಾದ ಮಾಜಿ ಮಧ್ಯಮ ವೇಗದ ಬೌಲರ್ ಚಮಿಂದ ವಾಸ್.
ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆಯಲಿರುವ `ಚಮಿಂದ ವಾಸ್ ಬೆನಿಫಿಟ್ ಟಿ-20 ಕ್ರಿಕೆಟ್ ಕಪ್~ನ ಟ್ರೋಫಿ ಅನಾವರಣಗೊಳಿಸಲು ಶನಿವಾರ ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಸಂವಾದ ನಡೆಸಿದರು.
`ನಾನು ಆಡುತ್ತಿದ್ದಾಗ ಎಷ್ಟೊ ಸಲ ಎಲ್ಬಿಡಬ್ಲ್ಯುಗೆ ಸಲ್ಲಿಸಿದ ಮನವಿಗಳು ವಿಶ್ವಸನೀಯವಾಗಿದ್ದರೂ ತಿರಸ್ಕೃತವಾಗುತ್ತಿದ್ದ ಉದಾಹರಣೆಗಳಿವೆ.
ಎಲ್ಲ ರೀತಿಯ ತಂತ್ರಜ್ಞಾನವೂ ಕ್ರೀಡೆಯ ಅಭಿವೃದ್ಧಿಗೆ ನೆರವಾಗುತ್ತದೆ~ ಎಂದು 37 ವರ್ಷ ವಯಸ್ಸಿನ ವಾಸ್ ಅಭಿಪ್ರಾಯಪಟ್ಟರು.
ವಾಸ್ 1994ರಿಂದ 2009ರವರೆಗೆ (ಒಂದೂವರೆ ದಶಕ) ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. `ಈ ದೀರ್ಘ ಅವಧಿಗೆ ಆಡಲು ಸಾಧ್ಯವಾಗಿದ್ದು ನಾನು ದೈಹಿಕ ಕ್ಷಮತೆಯತ್ತಲೂ ಸಮಾನವಾಗಿ ಗಮನಹರಿಸಿದ್ದರಿಂದ~ ಎನ್ನುತ್ತಾರೆ.
`ನಾನು ಆಡುತ್ತಿದ್ದಾಗ 40 ಮಂದಿ ಮಧ್ಯಮ ವೇಗದ ಬೌಲರ್ಗಳು ಬಂದು ಹೋದರು. ಇವರಲ್ಲಿ ನನಗೆ ಪರಿಣಾಮಕಾರಿಯಾಗಿ ಕಂಡವರು ಎಡಗೈ ಮಧ್ಯಮ ವೇಗದ ಬೌಲರ್ಗಳಾದ ಸಜೀವ ಡಿಸಿಲ್ವ ಮತ್ತು ನುವಾನ್ ಜೊಯ್ಸ ಮಾತ್ರ~ ಎಂದು ನೆನಪು ಬಿಚ್ಚಿಟ್ಟರು.
ತಮ್ಮ ಜತೆ ದೀರ್ಘ ಕಾಲ ಬೌಲ್ ಮಾಡಿದ ಮುತ್ತಯ್ಯ ಮುರಳೀಧರನ್ ಬಗ್ಗೆಯೂ ಮೆಚ್ಚುಗೆ ಮಾತು ಆಡಿದ ವಾಸ್, `ಶ್ರೀಲಂಕಾ ಮಂಡಳಿ ಹಿರಿಯ ಆಟಗಾರರ ಸಲಹೆಯನ್ನೂ ಪಡೆಯಲಿ~ ಎಂದರು.