ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುನೆಸ್ಕೊ ಪಟ್ಟಿ: ವಿರೋಧಕ್ಕೆ ಅಸಮಾಧಾನ

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಶಿರಸಿ:ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ 10 ಸೂಕ್ಷ್ಮ ತಾಣಗಳನ್ನು ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಸ್ತಾವವನ್ನು ವಿರೋಧಿಸುತ್ತಿರುವ ರಾಜ್ಯ ಸರ್ಕಾರದ ನಿಲುವಿಗೆ ಅರಣ್ಯ ಸಾಹಿತ್ಯ ಸಮ್ಮೇಳನದಲ್ಲಿ  ಅಸಮಾಧಾನ ವ್ಯಕ್ತಪಡಿಸಲಾಯಿತು.

ನಗರದ ಅರಣ್ಯ ಕಾಲೇಜಿನಲ್ಲಿ ಏರ್ಪಾಟಾಗಿರುವ ಎರಡು ದಿನಗಳ ಅರಣ್ಯ ಸಾಹಿತ್ಯ ಸಮ್ಮೇಳನವನ್ನು ಸಸಿ ವಿತರಣೆ ಮಾಡುವ ಮೂಲಕ ಮಂಗಳವಾರ  ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಉದ್ಘಾಟಿಸಿದರು.
~ರಾಜ್ಯದ ಪ್ರಮುಖರು ಯುನೆಸ್ಕೊ ಪಟ್ಟಿ ಸೇರ್ಪಡೆ ವಿರುದ್ಧ ಯಾಕೆ ಧ್ವನಿ ಎತ್ತಿರುವರೋ ಗೊತ್ತಿಲ್ಲ.

ಪಶ್ಚಿಮಘಟ್ಟವನ್ನು ರಕ್ಷಣೆಗೆ ಒಪ್ಪಿಸಲು ಮನಸ್ಸು ಸಿದ್ಧವಿಲ್ಲವೇ? ಪೂರ್ಣ ಮುಗಿಸಿದ ಮೇಲೆಯೇ ವಿಶ್ರಾಂತರಾಗುವ ಸಂಕಲ್ಪ ಮಾಡಿದಂತೆ ಕಾಣುತ್ತದೆ. ಅರಣ್ಯ ರಕ್ಷಣೆಯ ಕಾಳಜಿ ಕಾಣುತ್ತಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

~ಶ್ರೀಮಂತವಾಗಿರುವ ಪಶ್ಚಿಮಘಟ್ಟ ಉಳಿಸುವ ವಿಶ್ವಾಸಾರ್ಹ ಕಾರ್ಯವನ್ನು ಯುನೆಸ್ಕೊ ಮೂಲಕ ಉದ್ದೇಶಿಸಲಾಗಿದೆ. ಅದಕ್ಕೆ ಅವಕಾಶ ಕೊಡದಂತೆ ಹುನ್ನಾರ ನಡೆಯುತ್ತಿದೆ. ಬ್ರಿಟಿಷರು ಅರಣ್ಯ ಸಂಪನ್ಮೂಲ ಬಳಕೆಗೆ ಅರಣ್ಯ ಇಲಾಖೆ ಸೃಷ್ಟಿಸಿದ್ದರು. ಇವತ್ತಿಗೂ ಆ ಮನೋಭಾವ ಬದಲಾಗಿಲ್ಲ. ಸಚಿವರು, ಶಾಸಕರು, ಅರಣ್ಯ ಗುತ್ತಿಗೆದಾರರು ಯುನೆಸ್ಕೊ ಉದ್ದೇಶಕ್ಕೆ ಭಂಗ ಮಾಡುತ್ತಿದ್ದಾರೆ. ಪಶ್ಚಿಮಘಟ್ಟದಲ್ಲಿ 60-70ರಷ್ಟು ಜಲವಿದ್ಯುತ್ ಯೋಜನೆ, ಕಾರ್ಖಾನೆ, ರೆಸಾರ್ಟ್, ಹೆದ್ದಾರಿಗಳನ್ನು ಹುಟ್ಟುಹಾಕುವ ಹುನ್ನಾರವಿದೆ. ಪಶ್ಚಿಮಘಟ್ಟ ರಕ್ಷಣೆಗೆ ಅಡ್ಡಿ-ಆತಂಕದ ಪರಿಸ್ಥಿತಿ ತಂದಿದ್ದಾರೆ.

ಸಾಹಿತಿಗಳು ಸಹ ಸರ್ಕಾರದ ನಿಲುವಿನ ವಿರುದ್ಧ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಮಲೆನಾಡಿನ ಕುರಿತು ಬರೆಯಲು ಸಾಹಿತಿಗಳಿಗೆ ವಿಷಯವೇ ದೊರಕದಷ್ಟು ಪಶ್ಚಿಮಘಟ್ಟ ಬರಿದಾಗುತ್ತದೆ~ ಎಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಹಿತಿ ನಾ.ಡಿಸೋಜಾ ಕಳವಳ ವ್ಯಕ್ತಪಡಿಸಿದರು.

~ನಮ್ಮ ಜುಟ್ಟು ಬೇರೆಯವರ ಕೈಗೆ ಕೊಡುವುದಿಲ್ಲ~ ಎಂದು ರಾಜ್ಯ ಅರಣ್ಯ ಸಚಿವರು ಹೇಳಿದ್ದಾರೆ. ಆದರೆ ಈಗಾಗಲೇ ನಮ್ಮ ಜುಟ್ಟನ್ನು ಬೇರೆಯವರಿಗೆ ಕೊಟ್ಟಾಗಿದೆ. ಇನ್ನಾದರೂ ನನ್ನನ್ನು ರಕ್ಷಣೆ ಮಾಡಿ ಎನ್ನುವದು ಅರಣ್ಯದ ಮಾತಾಗಿದೆ~ ಎಂದು  ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ವಿಷಾದ ವ್ಯಕ್ತಪಡಿಸಿದರು.

ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಶಾಂತಾರಾಮ ಸಿದ್ದಿ, ಶಿರಸಿಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ ಉಪಸ್ಥಿತರಿದ್ದರು. ರಾಜೀವ ಅಜ್ಜೀಬಳ ಸ್ವಾಗತಿಸಿದರು. ಸುಬ್ರಾಯ ಮತ್ತೀಹಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಪಾದ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಹಾಸ್ಯಗಾರ ವಂದಿಸಿದರು.
ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ, ದಾಂಡೇಲಿ ನವ್ಯಜೀವಿ ಅರಣ್ಯ ವಿಭಾಗ ಸಂಯುಕ್ತವಾಗಿ ಸಮ್ಮೇಳನ ಆಯೋಜಿಸಿದ್ದವು. ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT