ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಪ್ರಕರಣದಿಂದ ಯಾರಿಗೆ ಲಾಭವಾಗಿದೆಯೋ ಅವರನ್ನು ಪೊಲೀಸರು ಏಕೆ ತನಿಖೆಗೆ ಒಳಪಡಿಸಿಲ್ಲ ಎಂದು ಈ ಹಗರಣದ ಆಪಾದನೆ ಮೇಲೆ ಬಂಧಿತರಾದ ಸುಧೀಂದ್ರ ಕುಲಕರ್ಣಿ ನ್ಯಾಯಾಲಯದಲ್ಲಿ ಶನಿವಾರ ಪ್ರಶ್ನಿಸಿದ್ದಾರೆ.
ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ ಅವರು, `ಈ ಪ್ರಕರಣದಲ್ಲಿ ಯುಪಿಎ-1 ಸರ್ಕಾರದ `ಅನೇಕರು~ ನೈಜ ಫಲಾನುಭವಿಗಳು ಮತ್ತು ಆರೋಪಿಗಳು. ಆದರೆ ಅವರನ್ನು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮುಟ್ಟಲು ಆಗಿಲ್ಲ~ ಎಂದರು.
`ನೈಜ ಫಲಾನುಭವಿಗಳು ಯಾರು ಎಂದು ಪ್ರಶ್ನಿಸಿದರೆ ಪೊಲೀಸರು ನಿರುತ್ತರರಾಗುತ್ತಾರೆ. ಏಕೆಂದರೆ ಯುಪಿಎ-1 ಸರ್ಕಾರವೇ ನಿಜವಾದ ಫಲಾನುಭವಿ. ಆ ಸರ್ಕಾರದಲ್ಲಿದ್ದ ಯಾರನ್ನೂ ಪೊಲೀಸರು ತನಿಖೆಗೆ ಒಳಪಡಿಸಿಲ್ಲ~ ಎಂದು ಸುಧೀಂದ್ರ ಕುಲಕರ್ಣಿ ಪರ ವಕೀಲರು ಆರೋಪಿಸಿದರು.
`ಸಂಸದರಿಗೆ ಆಮಿಷ ಒಡ್ಡಲು ಅಷ್ಟೊಂದು ಹಣ ಎಲ್ಲಿಂದ ಬಂತು? ಅಮರ್ ಸಿಂಗ್ಗೆ ಹಣ ನೀಡಿದವರು ಯಾರು? ಪೊಲೀಸರು ಈ ಹಣದ ಜಾಡನ್ನು ಭೇದಿಸಲು ವಿಫಲರಾಗಿದ್ದಾರೆ. ಹಾಗಾಗಿ ಇದು ಈಗಲೂ ಬಗೆಹರಿಯದ ಪ್ರಶ್ನೆಯಾಗಿದೆ~ ಎಂದರು.
`ನನ್ನ ಕಕ್ಷಿದಾರರು ಮುಗ್ಧರು. ಅವರು ಹಣ ಮಾಡಿಕೊಳ್ಳಲು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಲವಲೇಶದ ಸಾಕ್ಷಿಯೂ ಇಲ್ಲ. ವಿಶ್ವಾಸ ಮತಗಳಿಸಲು ಸರ್ಕಾರ ಪ್ರತಿಪಕ್ಷಗಳ ಸಂಸದರನ್ನು ಖರೀದಿಸಲು ತೊಡಗಿತ್ತು. ಭ್ರಷ್ಟಾಚಾರದ ಈ ಅತಿರೇಕವನ್ನು ಬಹಿರಂಗಪಡಿಸಲು ನನ್ನ ಕಕ್ಷಿದಾರರು ಮಾಡಿದ ಪ್ರಯತ್ನ ಅದು (ಸಂಸತ್ನಲ್ಲಿ ಹಣದ ಕಂತೆಗಳ ಪ್ರದರ್ಶನ)~ ಎಂದು ಕುಲಕರ್ಣಿ ಪರ ವಕೀಲರು ಹೇಳಿದರು.