ನಾಗಪುರ (ಪಿಟಿಐ): ಕಾಂಗ್ರೆಸ್ ನೇತೃತ್ವದ ಯುಪಿಎ-2 ಕೇಂದ್ರ ಸರ್ಕಾರವನ್ನು ಉರುಳಿಸಲು ಹಿರಿಯ ನಾಯಕರೊಬ್ಬರು ತಮ್ಮನ್ನು ಭೇಟಿ ಮಾಡಿದ್ದರು ಎಂದು ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.
`ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಿರಿಯ ಮುಖಂಡರೊಬ್ಬರು ನನ್ನ ಜತೆ ಸಂಪರ್ಕದಲ್ಲಿದ್ದರು. ಆದರೆ, ನಾನು ಅವರ ಸಲಹೆಯನ್ನು ತಿರಸ್ಕರಿಸಿದ್ದೆ' ಎಂದು ತಿಳಿಸಿರುವ ಅವರು, ಆ ಹಿರಿಯ ಮುಖಂಡ ಯಾರು ಎನ್ನುವುದು ಹೇಳಿಲ್ಲ.
`ನಾನು ಸಿದ್ಧಾಂತಗಳನ್ನು ನಂಬಿರುವ ವ್ಯಕ್ತಿ. ನನಗೆ ಏನಾದರೂ ಮಾಡಬೇಕು ಅನಿಸಿದರೆ ಅದನ್ನು ಸಾರ್ವಜನಿಕವಾಗಿಯೇ ಮಾಡುತ್ತೇನೆ. ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ' ಎಂದಿದ್ದಾರೆ. ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, `ನನ್ನ ಅಂತರ್ವಾಣಿ ಶುದ್ಧವಾಗಿದೆ. ಯಾವುದೇ ತಪ್ಪು ಮಾಡಿಲ್ಲ. ಅಲ್ಲದೇ ಪ್ರತ್ಯೇಕ ಅಜೆಂಡಾ ಹೊಂದಿಲ್ಲ.' ಎಂದು ಸ್ಪಷ್ಟಪಡಿಸಿದರು. ಗಡ್ಕರಿ ಒಡೆತನದ ಪೂರ್ತಿ ಸಮೂಹಕ್ಕೆ ಸೇರಿದ ಕಂಪೆನಿಗಳಲ್ಲಿ ಅಕ್ರಮವಾಗಿ ಹಣ ಹೂಡಿದ್ದಾರೆ ಎನ್ನುವ ಆರೋಪದ ಮೇರೆಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.