ಥಾಣೆ (ಐಎಎನ್ಎಸ್): `ಡಿಎಂಕೆ ಬೆಂಬಲ ವಾಪಸ್ ಪಡೆದ ನಂತರ ಕೇಂದ್ರ ಯುಪಿಎ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಪತನವಾಗಿ, ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಗಳಿವೆ' ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸುಳಿವು ನಿಡಿದ್ದಾರೆ.
`ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಈ ವಿಚಾರವನ್ನು ತಿಳಿಸಿದ್ದೇನೆ. ಅವರೂ ಇದೇ ಅಭಿಪ್ರಾಯ ಹೊಂದಿದ್ದು, ಚುನಾವಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ನಾನು ಮಾಡಿದ ಸಲಹೆಗೆ ಸಹಮತ ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದರು.
`ಯಾವುದೇ ಕ್ಷಣದಲ್ಲಿ ಎದುರಾಗಬಹುದಾದ ಚುನಾವಣೆಗೆ ಸನ್ನದ್ಧರಾಗಬೇಕಿದೆ' ಎಂದರು.
ಪಕ್ಷದ ಪ್ರಧಾನಿ ಅಭ್ಯರ್ಥಿ ಕುರಿತು ಕೇಳಲಾದ ಪ್ರಶ್ನೆಗೆ `ಯುಪಿಎ ಮೈತ್ರಿಕೂಟದ ಅತಿ ದೊಡ್ಡ ಪಕ್ಷ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಿದೆ' ಎಂದು ಪ್ರತಿಕ್ರಿಯಿಸಿದರು.