ಬೆಂಗಳೂರು: ಧೂಮಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ನಗರದ ಹೆಲ್ತ್ ಕೇರ್ ಗ್ಲೋಬಲ್ (ಎಚ್ಸಿಜಿ) ಕ್ಯಾನ್ಸರ್ ಆಸ್ಪತ್ರೆಯು ಬೃಹದಾಕಾರದ ಮಾನವ ಶ್ವಾಸಕೋಶದ ಪ್ರತಿಕೃತಿಯನ್ನು ನಿರ್ಮಿಸಿ, ಪ್ರದರ್ಶಿಸುವ ಮೂಲಕ ವಿಶ್ವ ತಂಬಾಕು ರಹಿತ ದಿನವನ್ನು ವಿಶಿಷ್ಟವಾಗಿ ಆಚರಿಸಿತು. ಯುಬಿ ಸಿಟಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
10 ಅಡಿ ಅಗಲ ಮತ್ತು 8.5 ಅಡಿ ಉದ್ದದ ಶ್ವಾಸಕೋಶದ ಪ್ರತಿಕೃತಿಯನ್ನು ಥರ್ಮಕೋಲ್ನಿಂದ ನಿರ್ಮಿಸಲಾಗಿದ್ದು, ಇದು ಲಿಮ್ಕಾ ದಾಖಲೆಗಳ ಪುಸ್ತಕದಿಂದ ಮನ್ನಣೆ ಪಡೆದ ರಚನೆಯಾಗಿದೆ. 2013ರ ಲಿಮ್ಕಾ ಪುಸ್ತಕದ ಸಂಚಿಕೆಯಲ್ಲಿ ಈ ವಿಷಯ ಪ್ರಕಟಗೊಳ್ಳಲಿದೆ.
ಶ್ವಾಸಕೋಶದ ಎರಡು ಬದಿಗಳ ಪೈಕಿ ಒಂದು ಆರೋಗ್ಯದಿಂದ ಸದೃಢವಾಗಿರುವಂತೆ ಹಾಗೂ ಇನ್ನೊಂದು ಧೂಮಪಾನದಿಂದ ಹಾಳಾಗಿರುವಂತೆ ರಚಿಸಲಾಗಿದೆ.ಎಚ್ಸಿಜಿ ನಿರ್ದೇಶಕ ದಿನೇಶ್ ಮಾಧವನ್ ಮಾತನಾಡಿ, `ಐದು ಬಗೆಯ ಪ್ರಮುಖ ಕ್ಯಾನ್ಸರ್ಗಳಿಂದ ಜಗತ್ತಿನಲ್ಲಿ ಪ್ರತಿ ವರ್ಷ 13 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಆ ಐದು ಬಗೆಯ ಕ್ಯಾನ್ಸರ್ಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಒಂದಾಗಿದೆ~ ಎಂದರು.
`ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಒಂದು ಲಕ್ಷ ಮಂದಿಯಲ್ಲಿ 11 ಪುರುಷರು ಮತ್ತು 3 ಮಹಿಳೆಯರು ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿರುವುದು ಪತ್ತೆಯಾಗಿದೆ. ತಂಬಾಕಿನಿಂದ ಈ ಕ್ಯಾನ್ಸರ್ಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ~ ಎಂದು ೀಳಿದರು.
ಆಸ್ಪತ್ರೆಯ ಕುತ್ತಿಗೆ ತಜ್ಞ ಡಾ.ಅಶೋಕ್ ಶೆಣೈ, `ಹದಿಹರೆಯದ ಮಕ್ಕಳು ತಂಬಾಕು ಉತ್ಪನ್ನಗಳ ಸೇವನೆ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಿರುವುದು ಕಳವಳಕಾರಿ ಸಂಗತಿ. ಅಂತಹ ಮಕ್ಕಳಲ್ಲಿ ತಂಬಾಕು ಸೇವನೆಯ ಕೆಡುಕುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ತಂಬಾಕು ಸೇವನೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿ ಜಾರಿಗೆ ತರಬೇಕು~ ಎಂದರು.
ಲಲಿತ್ ಅಶೋಕದಲ್ಲಿ ಜಾಗೃತಿ
ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ನಗರದ ಲಲಿತ್ ಅಶೋಕ ಹೋಟೆಲ್ನಲ್ಲಿ ಸಿಬ್ಬಂದಿ ಮತ್ತು ಅತಿಥಿಗಳಿಗೆ ತಂಬಾಕು ಸೇವನೆಯ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೋಟೆಲ್ನ ಪ್ರಧಾನ ವ್ಯವಸ್ಥಾಪಕ ಅಮಿತ್ ಸ್ಯಾಮ್ಸನ್, `ವ್ಯಕ್ತಿ ಆರೋಗ್ಯವಂತನಾಗಿರುವ ಮೂಲಕ ತನ್ನ ಕುಟುಂಬಕ್ಕೆ ಮಾತ್ರವಲ್ಲದೇ ಸದೃಢ ರಾಷ್ಟ್ರ ನಿರ್ಮಾಣಕ್ಕೂ ಕೊಡುಗೆ ನೀಡಬಹುದು~ ಎಂದರು.
ಧೂಮಪಾನ ಮಾಡುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ ಹೋಟೆಲ್ ಸಿಬ್ಬಂದಿ, ಧೂಮಪಾನ ತ್ಯಜಿಸುವಂತೆ ಅತಿಥಿಗಳಿಗೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.