ದೇವನಹಳ್ಳಿ: ಪಟ್ಟಣದ ಗುರುಭವನದಲ್ಲಿ ಭಾನುವಾರ ಯುವಕಾಂಗ್ರೆಸ್ ಸಮಿತಿ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಬೂತ್ ಮಟ್ಟದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗಾಗಿ ಸ್ಪರ್ಧಿಸಿದ್ದ ಅಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಬಂದು ಮತ ಚಲಾಯಿಸಿದರು.
ಚುನಾವಣೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ಯುವಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ `ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೆಕಿದೆ. ಯಾವುದೇ ವಿಚಾರದಲ್ಲಿ ಪಕ್ಷದ ಮುಖಂಡರು ಮೂಗು ತೂರಿಸುವಂತಿಲ್ಲ, ಇದು ಪಕ್ಷದ ನಿಯಮ ಹಾಗೂ ಸಿದ್ಧಾಂತವಾಗಿದೆ.
ರಾಹುಲ್ ಗಾಂಧಿಯವರ ದೂರದೃಷ್ಠಿ ಚಿಂತನೆಯಿಂದಾಗಿ ಪಕ್ಷದಲ್ಲಿ ನಿಷ್ಠರಿಗೆ ಇಲ್ಲಿ ಅವಕಾಶ ಲಭಿಸಲಿದೆ. ಜೊತೆಗೆ ಪಕ್ಷ ಬೆಳವಣಿಗೆ, ಸಂಘಟನೆಯ ಮೂಲ ಬೇರುಗಳು, ಬೂತ್ ಮಟ್ಟದಲ್ಲಿ ಸ್ಪರ್ಧಿಸಿರುವುದರ ಹಿನ್ನೆಲೆಯಲ್ಲಿ ಆರೋಗ್ಯಕರ ನಾಯಕರು ಲಭಿಸಲಿದ್ದಾರೆ. ನಾಯಕರ ಆಯ್ಕೆಯಲ್ಲಿ ಇದೊಂದು ಪ್ರಾಯೋಗಿಕ ಪ್ರಯತ್ನವಾಗಿದ್ದು ಯುವಕರಲ್ಲಿ ಉತ್ಸಾಹ, ಚೈತನ್ಯ ತುಂಬುವ ಪ್ರಯತ್ನ ಇದಾಗಿದೆ ಎಂದರು.
ಜಿಲ್ಲಾ ಕಂಗ್ರೆಸ್ ಅಧ್ಯಕ್ಷ ಬಚ್ಚೇಗೌಡ ಮಾತನಾಡಿ, `ದೇಶದಲ್ಲಿ ಐದು ವಲಯಗಳನ್ನಾಗಿ ಬೇರ್ಪಡಿಸಿ ವಿಧಾನಸಭೆ, ಲೋಕಸಭೆ ಹಾಗೂ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ರಾಮಯ್ಯ, ಶಾಸಕ ಕೆ.ವೆಂಕಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೃಷಿಕ ಸಮಾಜ ನಿರ್ದೇಶಕ ಹೆಚ್.ಎಂ.ರವಿಕುಮಾರ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಎಸ್.ಸಿ.ಚಂದ್ರಪ್ಪ, ಯುವಕಾಂಗ್ರೆಸ್ ಟೌನ್ ಅಧ್ಯಕ್ಷ ಶಂಕರ್ ಇತರರು ಇದ್ದರು.