ಮಡಿಕೇರಿ: ಮಡಿಕೇರಿ ದಸರಾ ಉತ್ಸವದ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಯುವ ದಸರಾಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಮುಖ್ಯವಾಗಿ ಯುವ ಜನಾಂಗವನ್ನು ಗಮನದಲ್ಲಿಟ್ಟುಕೊಂಡು ಕಳೆದ ನಾಲ್ಕು ವರ್ಷಗಳಿಂದ ಯುವ ದಸರಾ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಕಲಾ ತಂಡಗಳಲ್ಲದೇ ಮಂಗಳೂರು, ಮೈಸೂರು, ಬೆಂಗಳೂರಿನ ತಂಡಗಳು ಸಹ ಭಾಗವಹಿಸಿ, ನೃತ್ಯ, ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಿದವು.
ಬಿಸಿಗಾಳಿ ಬಲೂನ್ ಅನ್ನು ಹಾರಿಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠ ಮಂಜುನಾಥ್ ಅಣ್ಣಿಗೇರಿ ಅವರು ಯುವ ದಸರಾಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ತಮ್ಮಲ್ಲಿ ಅಡಗಿರುವ ಕಲೆಯನ್ನು ಸಾರ್ವಜನಿಕರ ಎದುರು ಪ್ರದರ್ಶಿಸಲು ಯುವಕರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಮಾತನಾಡಿ, ರಾಕ್ಷಸೀ ಗುಣಗಳ ವೆುೀಲೆ ಒಳ್ಳೆಯತನದ ವಿಜಯವಾಗಿ ದಸರಾ ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದಸರಾ ಸಮಿತಿಯ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಯುವ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಬರದ ಹಿನ್ನೆಲೆಯಲ್ಲಿ ಮೈಸೂರು ದಸರಾದಲ್ಲಿ ಯುವ ದಸರಾವನ್ನು ಕೈಬಿಡಲಾಗಿದೆ. ಮಡಿಕೇರಿಯಲ್ಲಾದರೂ ಯುವ ದಸರಾವನ್ನು ನಡೆಸಿ ಎಂದು ಹಲವು ಜನರು ಕೋರಿಕೆ ಸಲ್ಲಿಸಿದ್ದರ ಫಲವಾಗಿ ಹಾಗೂ ಇಲ್ಲಿನ ಉತ್ಸಾಹಿ ಸಂಘಟಕರ ಸಹಾಯದಿಂದ ಈ ಬಾರಿಯೂ ಕೂಡ ಯುವ ದಸರಾ ನಡೆಯುತ್ತಿದೆ ಎಂದು ಹೇಳಿದರು.
ದಸರಾ ಸಮಿತಿಯ ಅಧ್ಯಕ್ಷರೂಆಗಿರುವ ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಈ ಕಾರ್ಯಕ್ರಮ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಯುವ ದಸರಾ ಸಮಿತಿ ಅಧ್ಯಕ್ಷ ಆರ್.ಪಿ. ರವಿ ಸ್ವಾಗತಿಸಿದರು. ಕಾಫಿ ಬೆಳೆಗಾರ ವಿನೋದ ಶಿವಪ್ಪ, ಉದ್ಯಮಿ ಬಿ.ವೈ. ರಾಜೇಶ್, ಜಗದೀಶ್ ರೈ, ಲೋಕೇಶ್ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ನಗರಸಭೆ ಸದಸ್ಯರು, ವಿವಿಧ ದಸರಾ ಸಮಿತಿ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.