ರಾಯಚೂರು: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ನಿಮಿತ್ತ ಆಚರಿಸಲಾಗುವ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಜೆಡಿಎಸ್ ರಾಯಚೂರು ನಗರ ಯುವ ಜನತಾದಳ ಘಟಕವು ಶುಕ್ರವಾರ `ಯುವ ಮತದಾರರ ನೋಂದಣಿ ಅಭಿಯಾನ~ ನಡೆಸಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ನಡೆದ ದ್ವಿಚಕ್ರ ವಾಹನ ರ್ಯಾಲಿಗೆ ಯುವ ಘಟಕದ ಜಿಲ್ಲಾ ಅಧ್ಯಕ್ಷ ಪವನಕುಮಾರ ಚಾಲನೆ ನೀಡಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಶಿವಶಂಕರ ವಕೀಲ ಮಾತನಾಡಿ, ಮತದಾನದ ಹಕ್ಕು, ಮತದಾನದ ಮಹತ್ವವನ್ನು ಯುವ ಸಮುದಾಯ ಅರಿತುಕೊಂಡಿರಬೇಕು. ಹದಿನೆಂಟು ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಜನ್ಮ ದಿನಾಂಕ ಪ್ರಮಾಣ ಪತ್ರ, ವಿಳಾಸ ಪ್ರಮಾಣಪತ್ರದೊಂದಿಗೆ ತಹಶೀಲ್ದಾರ ಕಚೇರಿಯಲ್ಲಿ ಈ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ದೇಶ ಬಲಿಷ್ಠವಾಗಿ ಕಟ್ಟಲು ಹತ್ತು ಜನ ಯುವಕರು ತಮಗೆ ಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಭಾರತ ಅಭಿವೃದ್ಧಿ ದೇಶವಾಗಿ ರೂಪುಗೊಳ್ಳಬೇಕಾದರೆ ಆಳುವ ನಾಯಕರು ಅತ್ಯುತ್ತಮರಾಗಿರಬೇಕು. ಈ ಆಶಯ ಈಡೇರಬೇಕಾದರೆ ಯುವ ಮತದಾರರ ನೋಂದಣಿಯಿಂದ ಸಾಧ್ಯ ಎಂದು ಪಕ್ಷದ ಮುಖಂಡರು ಹೇಳಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ನಗರ ಘಟಕದ ಅಧ್ಯಕ್ಷ ಬಿ ತಿಮ್ಮಾರೆಡ್ಡಿ, ನಗರ ಯುವ ಘಟಕದ ಅಧ್ಯಕ್ಷ ರಾಮಕೃಷ್ಣ ಆರ್, ಜಂಬುಲಿಂಗ ಯಾದವ್, ಖಲೀಲ್, ಅರಾಫತ್, ಆಂಜನೇಯ ವಕೀಲ, ಮಕ್ಬೂಲ್, ನಾಗರಾಜಸ್ವಾಮಿ, ಈರಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.