ಸುರತ್ಕಲ್: ಶುಕ್ರವಾರ ನಸು ಮುಂಜಾವಿನಿಂದ ಇಳಿ ಸಂಜೆಯವರೆಗೆ ಪಣಂಬೂರು ಕಡಲ ತಡಿಯಲ್ಲಿ ಯುವ ಯುವಜನರದ್ದೇ ಹಬ್ಬ . ಎಲ್ಲಿ ನೋಡಿದರಲ್ಲಿ ವಿದ್ಯಾರ್ಥಿ ಸಮುದಾಯ, ಯುವಕ ಯುವತಿಯರ ಕಿಲಕಿಲ ನಗು, ಓಡಾಟ ತುಂಟಾಟಗಳದ್ದೇ ಸದ್ದು.
ಏನನ್ನಾದರೂ ಸಾಧಿಸ ಬೇಕು ಸ್ಪರ್ಧೆಯಲ್ಲಿ ಗೆಲ್ಲಬೇಕು ತನ್ನ ಬಗಲಿಗೂ ಒಂದು ಬಹುಮಾನ ಬೀಳಬೇಕು ಎನ್ನುವ ಹುರುಪಿನದ್ದೇ ಓಡಾಟ ಇದೆಲ್ಲ ನೋಡುಗರ ಕಣ್ಣಿಗೆ ರಸದೌತಣ ನೀಡಿತ್ತು. ಇದಕ್ಕೆ ಮುಖ್ಯ ಕಾರಣ ಪಣಂಬೂರು ಬೀಚಿನಲ್ಲಿ ಶುಕ್ರವಾರ ನಡೆದಿದ್ದ ಯೂತ್ ಫೆಸ್ಟ್.
ಎಚ್ಎಚ್ಪಿ ಎಂಟರ್ಟೈನ್ಮೆಂಟ್ ಸಂಸ್ಥೆ ಯುವ ಸಮುದಾಯವನ್ನೇ ಗುರಿಯಾಗಿಸಿಕೊಂಡು, ಯುವಸಮುದಾಯಕ್ಕೆ ವಿಶೇಷ ಮನರಂಜನೆ ನೀಡಲು ಯೂತ್ ಫೆಸ್ಟ್ ಆಯೋಜಿಸಿತ್ತು. ಇದು ಪ್ರತಿಭಾ ವಿಕಸನದ ಮುಖ್ಯ ವೇದಿಕೆಯಾಗಿತ್ತು.
ಸಂಗೀತ, ನೃತ್ಯ, ಬೈಕ್ ಸಾಹಸ ಪ್ರದರ್ಶನ, ಮರಳು ಶಿಲ್ಪ, ಬೀಚ್ ಬಾಕ್ಸಿಂಗ್ ಇನ್ನೂ ಹಲವಾರು ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿತ್ತು. ಸಂಜನಾ ಪೈ ಚೆಂಡೆ ಬಾರಿಸುವ ಮೂಲಕ 2 ದಿನಗಳ ಉತ್ಸವಕ್ಕೆ ಚಾಲನೆ ನೀಡಿದರು. ಹೃದಯ ಪೈ, ಸಂಕೀರ್ತನ್, ಕೀರ್ತಿಕುಮಾರ್, ನರಸಿಂಹ, ಅನ್ನು ಮಂಗಳೂರು ,ಪಣಂಬೂರು ಬೀಚ್ ಅಭಿವೃದ್ದಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು.
ಡಿ.14ರ ಶನಿವಾರ ಖ್ಯಾತ ಡಿಜೆ ಕಿರಣ್ ಕಾಮತ್ ಅವರು ಮನರಂಜನಾ ಕಾರ್ಯಕ್ರಮ ನೀಡಲಿದ್ದು, ಡಿಜೆ ವ್ಲಾಕ್ಯೂ, ಡಿಜೆ ಲೋಗನ್, ಡಿಜೆ ಅದಿತಿ ಆಳ್ವ ಮತ್ತಿತರರು ಭಾಗವಹಿಸಲಿದ್ದಾರೆ.