ಬೆಂಗಳೂರು: ಕಲ್ಯಾಣನಗರದಲ್ಲಿ ಶನಿವಾರ ದೀಪಕ್ (24) ಎಂಬ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಚಿಕ್ಕಮಗಳೂರಿನ ಅವರು ಕಲ್ಯಾಣನಗರದಲ್ಲಿ ಸ್ನೇಹಿತನ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಸ್ನೇಹಿತ ಕೆಲಸಕ್ಕೆ ತೆರಳಿದ ನಂತರ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಮಾಲೀಕ ಮಹೇಶ್, ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆ ಬಾಡಿಗೆ ಕೇಳಲು ಹೋಗಿ ಕಿಟಕಿ ಮೂಲಕ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಮೊದಲು ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ದೀಪಕ್, 15 ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಬೇರೆ ಕೆಲಸ ಹುಡುಕಲು ಹೋಗಬೇಕು ಎಂದು ಶನಿವಾರ ಮನೆಯಲ್ಲೇ ಉಳಿದುಕೊಂಡಿದ್ದ’ ಎಂದು ಮೃತರ ಸ್ನೇಹಿತ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.
‘ದೀಪಕ್ ಅವರು ಬಲಗೈ ಮೇಲೆ ಬ್ಲೇಡ್ನಿಂದ ಪೂಜಾ ಎಂಬ ಹೆಸರನ್ನು ಗೀಚಿಕೊಂಡಿದ್ದಾರೆ. ಅದು ಸ್ನೇಹಿತನಿಗೆ ಗೊತ್ತಾಗಬಾರದೆಂದು ಹೆಸರಿನ ಮೇಲೆ ಕರವಸ್ತ್ರ ಕಟ್ಟಿದ್ದರು. ಒಂದು ವಾರದಿಂದ ಕೈಗೆ ಕರವಸ್ತ್ರ ಕಟ್ಟಿರುವುದನ್ನು ಸ್ನೇಹಿತ ಪ್ರಶ್ನಿಸಿದಾಗ, ‘ಜಿಮ್ಗೆ ಹೋಗುತ್ತಿರುವುದರಿಂದ ಕೈ ನೋವಿದೆ. ಹೀಗಾಗಿ ಬಟ್ಟೆ ಕಟ್ಟಿದ್ದೇನೆ’ ಎಂದು ಹೇಳಿದ್ದರು. ಶನಿವಾರ ರಾತ್ರಿ ನೇಣಿನ ಕುಣಿಕೆಯಿಂದ ಶವ ಇಳಿಸಿ ಕರವಸ್ತ್ರ ತೆರೆದು ನೋಡಿದಾಗ ವಾಸ್ತವ ಸಂಗತಿ ಗೊತ್ತಾಯಿತು. ಪ್ರೇಮ ವೈಫಲ್ಯದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಪೀಣ್ಯ ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಯುವಕ ಆತ್ಮಹತ್ಯೆ
ಮಡಿವಾಳ ಸಮೀಪದ ಗಾರೇಪಾಳ್ಯದಲ್ಲಿ ಬಾಲರಾಜ್ (25) ಎಂಬುವರು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೊದಲು ಗ್ಯಾರೆಜ್ನಲ್ಲಿ ಕೆಲಸ ಮಾಡುತ್ತಿದ್ದ ಬಾಲರಾಜ್, ಎರಡು ತಿಂಗಳಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮದ್ಯವ್ಯಸನಿಯಾಗಿದ್ದ ಅವರು, ಸ್ನೇಹಿತರೊಂದಿಗೆ ಸುತ್ತಾಡಿ ಸಂಜೆ ಮನೆಗೆ ಬಂದಿದ್ದಾರೆ. ಬಳಿಕ ಪ್ರತ್ಯೇಕ ಕೋಣೆಗೆ ತೆರಳಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾತ್ರಿ ಒಂಬತ್ತು ಗಂಟೆಗೆ ಅವರ ಅಜ್ಜಿ ಊಟಕ್ಕೆ ಕರೆಯಲು ಹೋದಾಗ ಒಳಗಿನಿಂದ ಚಿಲಕ ಹಾಕಿದೆ. ಹಲವು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಬಳಿಕ ಕುಟುಂಬ ಸದಸ್ಯರು ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.