ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆಗೆ ಬೋಸ್ `ಆದರ್ಶ ಪುರುಷ' - ಮುಖರ್ಜಿ

Last Updated 20 ಜನವರಿ 2013, 11:11 IST
ಅಕ್ಷರ ಗಾತ್ರ

ಕೊಲ್ಕತ್ತಾ (ಐಎಎನ್‌ಎಸ್): ಯುವಜನತೆಯ ಪಾಲಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಓರ್ವ ನಿಜವಾದ `ಆದರ್ಶ ಪುರುಷ' ಎಂದು ಭಾನುವಾರ ಬಣ್ಣಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಬೋಸ್ ಅವರ ಜೀವನವೇ  ತ್ಯಾಗ ಮತ್ತು ದೇಶ ಸೇವೆಯ ಕಥೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪೂರ್ವಜರ ಮನೆ ನೇತಾಜಿ ಭವನದಲ್ಲಿ ಜರುಗಿದ ಬೋಸ್ ಅವರ 116ನೇ ಜನ್ಮದಿನಾಚರಣೆ ಸಮಾರಂಭ ಉಧ್ಘಾಟಿಸಿ ಮಾತನಾಡಿದ ಅವರು `ಭಾರತದ ಹೆಮ್ಮೆಯ ವೀರಪುತ್ರರಾಗಿದ್ದ ಬೋಸ್ ಅವರ ಜೀವನವೇ ಒಂದು ತ್ಯಾಗ ಮತ್ತು ದೇಶ ಸೇವೆಯ ಕಥೆಯಾಗಿದೆ. `ಸೇವೆ' ಹಾಗೂ `ತ್ಯಾಗ'ಗಳೇ ಧ್ಯೇಯಗಳಾಗಿಸಿಕೊಂಡಿದ್ದ ಇಂತಹ ಮಹಾನ್ ಚೇತನವನ್ನು ನಾವು ಬೇರೆ ಯಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ' ಎಂದು ತಿಳಿಸಿದರು.

`ನೇತಾಜಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನದ ಕೊನೆಯ ಗಳಿಗೆವರೆಗೆ ಹೋರಾಡಿದರು' ಎಂದು ಪ್ರಣವ್ ಹೇಳಿದರು.

ಇದೇ ವೇಳೆ, ನೇತಾಜಿ ಅವರ ಮೇಲೆ ಸ್ವಾಮಿ ವಿವೇಕಾನಂದರು ಭಾರಿ ಪ್ರಭಾವ ಬೀರಿದ್ದರು ಎಂದು ಹೇಳಿದ ಮುಖರ್ಜಿ ಅವರು `15ನೇ ವಯಸ್ಸಿನಲ್ಲಿ ತಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದ ಪ್ರವೇಶಿಸಿದರು ಎಂದು ನೇತಾಜಿ ಬರೆದಿದ್ದಾರೆ. ಯುದ್ದ ಸಮಯದಲ್ಲಿ ಕೂಡ ನೇತಾಜಿ ಅವರು ಸಿಂಗಾಪುರದಲ್ಲಿ ಯೋಗಾಭ್ಯಾಸಕ್ಕಾಗಿ ರಾಮಕೃಷ್ಣ ಮೀಷನ್‌ಗೆ ಭೇಟಿ ನೀಡಿದ್ದರು' ಎಂದರು.

ಕಳೆದ ವರ್ಷದ ನಡೆದ ರಾಷ್ಟ್ರಪತಿ ಚುನಾವಣೆ ವೇಳೆ ನನಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಬೋಸ್ ಅವರು ನೀಡಿದ್ದ ಹೇಳಿಕೆಗಳೇ ಸ್ಫೂರ್ತಿ ನೀಡಿದ್ದವು ಎಂದು ಪ್ರಣವ್ ಹೇಳಿದರು.

1937ರಲ್ಲಿ ಭಾರತ ಎಂಟು ಪ್ರಾಂತ್ಯದ ಪ್ರಮುಖರಿಗೆ ನೇತಾಜಿ ಅವರು ಬರೆದ ಪತ್ರವೊಂದು ನಂತರದಲ್ಲಿ ರಾಷ್ಟ್ರದ ಸಂವಿಧಾನದ ಮಾರ್ಗದರ್ಶಿ ತತ್ವಗಳ ಭಾಗವಾಯಿತು. ಆಗಲೇ ನೇತಾಜಿ ಅವರು ಯೋಜನೆ ಪರಿಕಲ್ಪನೆ ಮತ್ತು ಯೋಜನಾಬದ್ಧ ಆರ್ಥಿಕ ಅಭಿವೃದ್ಧಿ ಕಲ್ಪನೆಗಳನ್ನು ರೂಪಿಸಿದ್ದರು ಎಂದು ತಿಳಿಸಿದರು.

ಸಮಾರಂಭದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಎಮ್.ಕೆ.ನಾರಾಯಣನ್, ಬೋಸ್ ಅವರ ಸೋದರ ಸೋಸೆ ಕೃಷ್ಣಾ ಬೋಸ್, ಪುತ್ರಿ ಅನಿತಾ ಪಫ್, ಅಳಿಯ ಮಾರ್ಟಿನ್ ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT