ಶಿವಮೊಗ್ಗ: ಕ್ರೀಡಾಕೂಟದ ಉದ್ದೇಶ ಕೇವಲ ಆಟವಾಡುವುದಲ್ಲ, ಜೀವನದಲ್ಲಿ ಎದುರಾಗುವ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಹಾಕಿಕೊಳ್ಳುವ ಭೂಮಿಕೆ ಎಂದು ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ ತಿಳಿಸಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಜ್ಞಾನಸಾಗರ ಡಿ.ಇಡಿ ಕಾಲೇಜು ಸಂಯುಕ್ತವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಡಿ.ಇಡಿ ಕಾಲೇಜುಗಳ ‘ಜಿಲ್ಲಾಮಟ್ಟದ ಯುವಜನೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
ಧರಣಿಗೆ ಬೆಂಬಲ: ನೆಹರು ಕ್ರೀಡಾಂಗಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಕ್ರೀಡಾಪಟುಗಳು ನಡೆಸುತ್ತಿರುವ ಧರಣಿಗೆ ಆಯನೂರು ಮಂಜುನಾಥ ಇದೇ ಸಂದರ್ಭದಲ್ಲಿ ಬೆಂಬಲ ಸೂಚಿಸಿದರು.
ಕ್ರೀಡಾಂಗಣವನ್ನು ಈ ಹಿಂದೆ ಹಲವು ಕಾರ್ಯಕ್ರಮಗಳಿಗೆ ನೀಡಲಾಗಿದೆ ಎಂದು ಸಮರ್ಥಿಸಿಕೊಳ್ಳುವುದು ಸಮಂಜಸವಲ್ಲ. ಈ ತರಹದ ಚಟುವಟಿಕೆಗಳು ಕಡಿಮೆಯಾಗಬೇಕು ಎಂದರು.
ಪ್ರಸನ್ನನಾಥ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಎನ್ಎಸ್ಎಸ್ ರಾಜ್ಯ ಕಾರ್ಯಕ್ರಮ ಸಂಯೋಜಕ ಗೋವಿಂದಯ್ಯ, ಶಿಮೂಲ್ ನಿರ್ದೇಶಕ ಗಂಗಾಧರ್ ಇತರರು ಉಪಸ್ಥಿತರಿದ್ದರು. ಡಯಟ್ ಪ್ರಾಂಶುಪಾಲರಾದ ಜಿ.ಪಿ. ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು.