ಬೆಂಗಳೂರು: ಜಗಜೀವನರಾಂನಗರ ಸಮೀಪದ ಜನತಾ ಕಾಲೊನಿಯಲ್ಲಿ ಶುಕ್ರವಾರ ರಾತ್ರಿ ನೇತ್ರಾ (18) ಎಂಬ ಯುವತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆ.ಆರ್.ಪುರದಲ್ಲಿ ವಿದ್ಯಾ (34) ಎಂಬುವರು ಬೆಂಕಿ ಹಚ್ಚಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜನತಾ ಕಾಲೊನಿ ನಿವಾಸಿ ರಾಜು ಎಂಬುವರ ಮಗಳು ನೇತ್ರಾ, ಕಲ್ಯಾಣ ಮಂಟಪವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು.
ಕುಟುಂಬ ಸದಸ್ಯರೆಲ್ಲಾ ರಾತ್ರಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ನೇತ್ರಾ ಅಸ್ವಸ್ಥಗೊಂಡಿದ್ದಳು. ನಂತರ ಕುಟುಂಬ ಸದಸ್ಯರು ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆಕೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಮೃತಪಟ್ಟ ದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗಜೀವನರಾಂನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತೊಂದು ಪ್ರಕರಣ: ತಮಿಳು ನಾಡು ಮೂಲದ ವಿದ್ಯಾ ಅವರು 2010ರಿಂದ ಕೆ.ಆರ್.ಪುರದ ಹೊಸ ಬಜಾರ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪುಣೆಯ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಅವರು ಇಂಟ ರ್ನೆಟ್ ಮೂಲಕ ಮನೆಯಿಂ ದಲೇ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾ, ನಾಲ್ಕೈದು ದಿನಗಳಿಂದ ಮನೆಯಿಂದ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯ ಮಾಲೀಕರು ಶನಿವಾರ ಅವರ ಮನೆಯ ಬಳಿ ಹೋಗಿ ಪರಿಶೀಲಿಸಿದಾಗ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿದ್ದುದು ಗೊತ್ತಾಗಿದೆ. ನಂತರ ಅವರು ನೆರೆಹೊರೆ ಯವರ ಸಹಾಯದಿಂದ ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿದ್ಯಾ ಅವರು ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.