ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿದ್ದು ಈಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿಯನ್ನು ಬೆಂಗಳೂರಿನ ಪ್ಯಾಲೆಸ್ ಗುಟ್ಟಳ್ಳಿಯ ನಿವಾಸಿ ಶೋಭಾ (23) ಎಂದು ಗುರುತಿಸಲಾಗಿದೆ.
ಬನ್ನೇರುಘಟ್ಟ ಅರಣ್ಯದಲ್ಲಿನ ಸುವರ್ಣಮುಖಿ ಕೊಳದ ಹಿಂದಿರುವ ಬಿದಿರು ಪೊದೆಗಳಲ್ಲಿ ಶವ ಪತ್ತೆಯಾಗಿದೆ. ಹೊಟ್ಟೆಗೆ ಎರಡು ಕಡೆ ಚಾಕುವಿನಿಂದ ತಿವಿದು ಕತ್ತಿಗೆ ಹಗ್ಗಬಿಗಿದು ನಂತರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಗೆಳೆಯನ ಮೇಲೆ ಶಂಕೆ: `ಬನ್ನೇರುಘಟ್ಟಕ್ಕೆ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿನಲ್ಲಿ ಮೃತ ಶೋಭಾ ಮತ್ತು ಅವಳ ಗೆಳೆಯ ಬಂದಿದ್ದರು. ಇವರು ಬೆಟ್ಟ ಹತ್ತಿ ಅಲ್ಲಿಂದ ಕಾಡಿನ ಕಾಲು ದಾರಿಯಲ್ಲಿ ನಡೆದು ಸುವರ್ಣಮುಖಿ ಕೊಳದ ಹಿಂದಿನ ಬಂಡೆ ಮೇಲೆ ಅಕ್ಕಪಕ್ಕವೇ ಕೂತು ಮಾತನಾಡುತ್ತಿದ್ದುದನ್ನು ಹಸು ಮೇಯಿಸಲು ಬಂದಿದ್ದ ಹುಡುಗರು ನೋಡಿದ್ದರು.
ಈ ಹುಡುಗರು ಇವರನ್ನು ನೋಡಿದ ಸ್ವಲ್ಪವೇ ಸಮಯದ ನಂತರ ಇವರು ಕೂತಿದ್ದ ಸ್ಥಳದಿಂದ ಮೂರು ಬಾರಿ ಜೋರಾಗಿ ಕಿರುಚಿದ ಶಬ್ದ ಕೇಳಿಬಂದು ಸ್ತಬ್ಧವಾಯಿತು. ಆಗ ಹಸು ಮೇಯಿಸುವ ಹುಡುಗರು ಕೂಡಲೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಈ ಸಿಬ್ಬಂದಿ ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಷ್ಟರಲ್ಲಿ ಯುವತಿಯ ಜೀವ ಹೋಗಿತ್ತು. ಆಕೆಯ ಹೊಟ್ಟೆಗೆ ಎರಡು ಬಾರಿ ಚಾಕುವಿನಿಂದ ತಿವಿದು, ಕತ್ತಿಗೆ ಹಗ್ಗ ಬಿಗಿದು ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿತ್ತು' ಎಂದು ರಮೇಶ್ ಘಟನೆಯನ್ನು ವಿವರಿಸಿದ್ದಾರೆ.
`ಶೋಭಾ ತನ್ನ ಗೆಳೆಯನೊಂದಿಗೆ ಅರಣ್ಯ ಪ್ರದೇಶಕ್ಕೆ ಬಂದಿದ್ದು ಆತನೇ ಕೊಲೆ ಮಾಡಿರಬಹುದು' ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಶಂಕಿಸಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದರು.