ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಎನ್.ಪ್ರಭುದೇವ್ ಅವರು ವಿಶ್ವವಿದ್ಯಾಲಯ ಅಧೀನದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಆಡಳಿತ ಮಂಡಳಿಯ ಸಾರಥ್ಯ ವಹಿಸಿಕೊಳ್ಳುವಂತೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರಲ್ಲಿ ಮನವಿ ಮಾಡಿದ್ದಾರೆ.
ನಾರಾಯಣಮೂರ್ತಿ ಅವರು ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆಗಳ (ಐಐಟಿ) ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ಮಾಡಿದ್ದ ಭಾಷಣದಲ್ಲಿ, ಐಐಟಿಗೆ ಸೇರುತ್ತಿರುವ ವಿದ್ಯಾರ್ಥಿಗಳ ಗುಣಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರು ವಿವಿ ಕುಲಪತಿಗಳು ಈ ಕುರಿತು ಬಹಿರಂಗ ಪತ್ರ ಬರೆದಿದ್ದಾರೆ.
`ಸರ್ ಎಂ.ವಿಶ್ವೇಶ್ವರಯ್ಯ ಅವರಿಂದ ಆರಂಭವಾದ ಯುವಿಸಿಇ ಇದೀಗ 24 ವಿಭಾಗಗಳ ಜತೆಗೆ ಉತ್ತಮ ಸೌಕರ್ಯಗಳನ್ನೂ ಹೊಂದಿದೆ. ತಾಂತ್ರಿಕ ಶಿಕ್ಷಣ ನೀಡುತ್ತಿರುವ ಕಾಲೇಜುಗಳಲ್ಲಿ ಇಡೀ ದೇಶದಲ್ಲಿ 24ನೇ ಸ್ಥಾನವನ್ನು ಹೊಂದಿದೆ. ಇದನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ನಿಮ್ಮಂತಹ ದೂರದೃಷ್ಟಿಯುವುಳ್ಳವರು ಅಧ್ಯಕ್ಷರಾದರೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬಹುದು ಎಂಬ ಉದ್ದೇಶದಿಂದ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ~ ಎಂದು ಡಾ. ಪ್ರಭುದೇವ್ ಕೋರಿದ್ದಾರೆ.