ಇಂದೋರ್(ಪಿಟಿಐ): ಬಹುಜನ ಸಮಾಜ ಪಕ್ಷದ ಮುಖಂಡ ದೀಪಕ್ ಭಾರದ್ವಾಜ್ ಅವರ ಕೊಲೆಗೆ ಸಂಬಂಧಿಸಿದಂತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಯೋಗ ಗುರು ಅವಿನಾಶ್ ಶಾಸ್ತ್ರಿ ಎಂಬುವವರನ್ನು ಗುರುವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.ಅವಿನಾಶ್ ಶಾಸ್ತ್ರಿ `ಅಧ್ಯಾತ್ಮ ಗುರು'ವಿನ ಕೇಂದ್ರದಲ್ಲಿ ಯೋಗ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಎಸ್ಪಿ ಮುಖಂಡ ದೀಪಕ್ ಭಾರದ್ವಾಜ್ ಅವರ ಕೊಲೆ ಭೂ ವ್ಯಾಜ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿದ್ದು ಅವಿನಾಶ್ ಭಾಗಿಯಾಗಿದ್ದಾರೆ ಎಂದು ಶಂಕಿಸಿ ಕಳೆದ ರಾತ್ರಿ ಇಲ್ಲಿನ ವಿಮಾನ ನಿಲ್ದಾಣದ ಹತ್ತಿರವಿರುವ `ಉಮಾನಂದ ಪಾರಮಾರ್ಥಿಕ ನ್ಯಾಸ ಆಶ್ರಮ'ದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
`ಅವಿನಾಶ್ ಶಾಸ್ತ್ರಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದೆಹಲಿ ಅಪರಾಧ ವಿಭಾಗದ ಪೊಲೀಸರ ತಂಡ ಶಾಸ್ತ್ರಿ ಅವರನ್ನು ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ವಿಚಾರ ನಡೆಸುತ್ತಿದೆ' ಎಂದು ವಿಮಾನನಿಲ್ದಾಣದ ಪೊಲೀಸ್ ಠಾಣೆಯ ಅಧಿಕಾರಿ ಅಖಿಲೇಶ್ ದ್ವಿವೇದಿ ತಿಳಿಸಿದ್ದಾರೆ.