ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಭ್ರಷ್ಟಾಚಾರದ ನಿರ್ಮೂಲನೆಗೆ ಹೋರಾಟ ಆರಂಭಿಸಿದ್ದಾರೆ. ಸಿ.ಬಿ.ಐ, ಲೋಕಾಯುಕ್ತ ಇನ್ನಿತರೆ ತನಿಖಾ ಸಂಸ್ಥೆಗಳು ಸ್ವಾತಂತ್ರ್ಯಾ ನಂತರ ಸತತವಾಗಿ ಶ್ರಮಿಸುತ್ತಾ ಬಂದಿದ್ದರೂ ಸಹ ಭ್ರಷ್ಟಾಚಾರ ಬ್ರಹ್ಮರಾಕ್ಷಸನಂತೆ ಬೆಳೆಯುತ್ತಿದೆ. ಹೀಗಿರುವಾಗ ಭ್ರಷ್ಟಾಚಾರ ನಿರ್ಮೂಲನೆಗೆ ಯೋಗ ಗುರು ಉಪವಾಸ ನಡೆಸುವುದರ ಹಿಂದೆ ರಾಜಕೀಯ ವಾಸನೆ ಇರುವಂತಿದೆ.
ಏನೇ ಆಗಲಿ ಈ ದೇಶದ ಅಭಿವೃದ್ಧಿಗೆ ಆತಂಕಗಳಾಗಿರುವ ಅಸ್ಪೃಶ್ಯತೆ, ಆರ್ಥಿಕ ಅಸಮಾನತೆ, ಆದಿವಾಸಿಗಳ ಮೂಲಭೂತ ಸಮಸ್ಯೆಗಳು, ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ, ವಂಶವಾಹಿನಿ ರಾಜಕೀಯ ಅಧಿಕಾರ, ಧಮನಿತರ ಸಬಲೀಕರಣ, ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಮತ್ತು ಕೋಮು ಸೌಹಾರ್ದ ಇನ್ನಿತರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲಿ. ಭ್ರಷ್ಟಾಚಾರ ನಿರ್ಮೂಲನೆಯ ಹೋರಾಟ ಪ್ರಾಮಾಣಿಕತೆ ಮತ್ತು ರಾಜಕೀಯ ರಹಿತವಾಗಿ ನಡೆದೀತೆ ಕಾದು ನೋಡಬೇಕಿದೆ.