ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಸದಸ್ಯ ಸ್ಥಾನದಿಂದ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರನ್ನು ಕಿತ್ತುಹಾಕಲು ಅವರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಷೋಕಾಸ್ ನೋಟಿಸ್ ಜಾರಿ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದೊಂದಿಗೆ ಯೋಗೇಂದ್ರ ಯಾದವ್ ಗುರುತಿಸಿಕೊಂಡಿದ್ದು, ಮಾನವ ಸಂಪನ್ಮೂಲ ಸಚಿವ ಎಂ.ಎಂ.ಪಲ್ಲಂರಾಜು ಅವರ ಕ್ಷೇತ್ರದಲ್ಲಿ ಹೊಸ ಹೋಟೆಲ್ ಆರಂಭಿಸಿರುವ ವಿಚಾರ ಸೇರಿದಂತೆ ಹಲವು ವಿದ್ಯಮಾನಗಳ ವಿರುದ್ಧ ಯುಜಿಸಿಯಲ್ಲಿ ದನಿ ಎತ್ತಿದ್ದರು.
ಈ ಕಾರಣ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.
ಆಮ್ ಆದ್ಮಿ ಪಕ್ಷದ ಸದಸ್ಯರಾಗಿರುವ ನಿಮ್ಮನ್ನು ಯುಜಿಸಿ ಸದಸ್ಯ ಸ್ಥಾನದಿಂದ ಯಾಕೆ ವಜಾಗೊಳಿಸಬಾರದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಯಾದವ್ ಅವರಿಗೆ ಬುಧವಾರ ನೋಟಿಸ್ನಲ್ಲಿ ತಿಳಿಸಿದೆ.
ರಾಜಕೀಯ ಪಕ್ಷದ ಸದಸ್ಯರಾಗಿರಬೇಕೋ ಇಲ್ಲವೇ ಯುಜಿಸಿ ಸದಸ್ಯರಾಗಿರಬೇಕೊ ಎಂಬುದನ್ನು ತೀರ್ಮಾನಿಸಿಕೊಳ್ಳಲು ಸಚಿವಾಲಯ ಒಂದು ವಾರದ ಕಾಲಾವಕಾಶ ನೀಡಿದೆ.
ಯಾದವ್ ಅವರಿಗೆ ಪತ್ರ ಬರೆದಿರುವ ಸಚಿವಾಲಯ, ನಿಗದಿತ ಅವಧಿಯಲ್ಲಿ ಉತ್ತರ ನೀಡಲು ವಿಫಲವಾದರೆ ಮುಂದೆ ಯಾವುದೇ ಉತ್ತರ ನೀಡಲು ಅವಕಾಶ ನೀಡುವುದಿಲ್ಲ ಎಂದೂ ತಿಳಿಸಿದೆ.