ಬೆಂಗಳೂರು: ವಿಧಾನಸಭೆಗೆ 2009ರಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ ಎಸಗಿರುವ ಆರೋಪ ಹೊತ್ತ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸೆಷನ್ಸ್ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಧನಂಜಯ ಎನ್ನುವವರು ನೀಡಿದ್ದ ದೂರಿನ ಆಧಾರದ ಮೇಲೆ ರಾಜ್ಯ ಚುನಾವಣಾ ಆಯೋಗ ಯೋಗೇಶ್ವರ್ ವಿರುದ್ಧ ದೂರು ದಾಖಲು ಮಾಡಿಕೊಂಡಿತ್ತು. ಈ ದೂರಿನ ಆಧಾರದ ಮೇಲೆ ತುಮಕೂರು ಜಿಲ್ಲಾ ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ರದ್ದತಿಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಆನಂದ ವಜಾಗೊಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಕುಣಿಗಲ್ನ ಕಲ್ಯಾಣ ಮಂಟಪ ಒಂದರಲ್ಲಿ ಬಾಡೂಟ ಹಾಕಿಸಿರುವ ಆರೋಪ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ 2011ರ ಮೇ ತಿಂಗಳಿನಲ್ಲಿ ದೋಷಾರೋಪ ಪಟ್ಟಿ ನಿಗದಿ ಮಾಡಲಾಗಿತ್ತು.
`ಘಟನೆ ನಡೆದ ಒಂದು ವರ್ಷದ ಒಳಗೆ ದೋಷಾರೋಪ ಪಟ್ಟಿ ನಿಗದಿ ಮಾಡಬೇಕು ಎಂದು ಜನಪ್ರತಿನಿಧಿಗಳ ಕಾಯ್ದೆಯಲ್ಲಿ ಉಲ್ಲೇಖವಾಗಿದೆ. ಆದರೆ ಈ ಪ್ರಕರಣದಲ್ಲಿ 2 ವರ್ಷಗಳ ನಂತರ ದೂರು ದಾಖಲಿಸಲಾಗಿದ್ದು ಇದು ಕಾನೂನು ಉಲ್ಲಂಘನೆ~ ಎಂದು ಯೋಗೇಶ್ವರ್ ದೂರಿದ್ದರು.
ಆದರೆ ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಲಿಲ್ಲ ಎಂದು ಸರ್ಕಾರದ ಪರ ವಕೀಲರ ವಾದ ಎತ್ತಿಹಿಡಿದ ನ್ಯಾಯಮೂರ್ತಿಗಳು ಅರ್ಜಿ ವಜಾಗೊಳಿಸಿದರು.