ನವದೆಹಲಿ (ಪಿಟಿಐ): ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ಅನುಮೋದಿಸಿದರೆ, ಇನ್ನು ಮುಂದೆ ಮುಖ್ಯಮಂತ್ರಿಗಳು ಪ್ರತಿ ವರ್ಷ ವಾರ್ಷಿಕ ಯೋಜನಾ ವೆಚ್ಚದ ಅನುಮೋದನೆಗಾಗಿ ಕೇಂದ್ರ ಯೋಜನಾ ಭವನಕ್ಕೆ ಅಲೆಯುವ ಅಗತ್ಯವಿಲ್ಲ.
`ಯೋಜನೆ ಮತ್ತು ಯೋಜನೇತರ ವೆಚ್ಚದ ನಡುವಿನ ಅಂತರವನ್ನು ತೆಗೆದುಹಾಕಿದರೆ, ಸದ್ಯ ಜಾರಿಯಲ್ಲಿರುವ ವಾರ್ಷಿಕ ಯೋಜನಾ ವೆಚ್ಚದ ಅನುಮೋದನೆಯ ಅಗತ್ಯ ಬೀಳುವುದಿಲ್ಲ ಎಂದು ಸರ್ಕಾರಿ ಆಯವ್ಯಯ ನಿರ್ವಹಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ಅಭಿಪ್ರಾಯಟ್ಟಿದೆ. ರಂಗರಾಜನ್ ನೇತೃತ್ವದ ಈ ಸಮಿತಿ, ಕಳೆದ ಏಪ್ರಿಲ್ನಲ್ಲಿ ಸರ್ಕಾರಿ ಆಯವ್ಯಯ ನಿರ್ವಹಣೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿತ್ತು.
ಸದ್ಯ ಜಾರಿಯಲ್ಲಿರುವ ಕ್ರಮದಂತೆ, ರಾಜ್ಯಗಳ ಮುಖ್ಯಮಂತ್ರಿಗಳು ವಾರ್ಷಿಕ ಯೋಜನಾ ವೆಚ್ಚದ ಅನುಮೋದನೆಗಾಗಿ ಪ್ರತಿ ವರ್ಷವೂ ಯೋಜನಾ ಆಯೋಗಕ್ಕೆ ಭೇಟಿ ನೀಡಬೇಕು.
ಯೋಜನಾ ಆಯೋಗದ ಉಪಾಧ್ಯಕ್ಷರೊಂದಿಗೆ ನಡೆಯುವ ಚರ್ಚೆಯಲ್ಲಿ ಮುಖ್ಯಮಂತ್ರಿಗಳ ಜತೆಗೆ ಆಯಾ ರಾಜ್ಯಗಳ ಉನ್ನತ ಅಧಿಕಾರಿಗಳು ಮತ್ತು ಸಚಿವರು ಭಾಗವಹಿಸಬೇಕು ಎನ್ನುವ ನಿಯಮವಿದೆ.
ಈ ಪದ್ಧತಿಯಲ್ಲಿ ಸುಧಾರಣೆ ತರುವುದು ಸಮಿತಿಯ ಉದ್ದೇಶವಾಗಿದೆ.