ಬೆಳ್ತಂಗಡಿ: ದೇಶದ ಜನಸಂಖ್ಯೆಯ ಆಧಾರದಲ್ಲಿ ಕುಟುಂಬ ವ್ಯವಸ್ಥೆ, ಆರ್ಥಿಕ ಪರಿವರ್ತನೆ, ಸಾಮಾಜಿಕ ಸ್ಥಿತ್ಯಂತರ ಮೊದಲಾದ ಅಂಶಗಳನ್ನು ಪರಿಶೀಲಿಸಿ ಸರ್ಕಾರ ಮುಂದಿನ ಯೋಜನೆ ರೂಪಿಸಲು ಜನಗಣತಿ ಅತಿ ಅಗತ್ಯವಾಗಿದೆ, ಎಲ್ಲಾ ಪ್ರಜೆಗಳು ಮತ್ತು ಗಣತಿದಾರರು ಹೊಣೆಗಾರಿಕೆಯಿಂದ ಯಶಸ್ವಿ ಜನಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಲಹೆ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ಬುಧವಾರ ಜನಗಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಪ್ರಗತಿಗಾಗಿ ಸೂಕ್ತ ಯೋಜನೆ ರೂಪಿಸಲು ಜನಗಣತಿ ಅಮೂಲ್ಯ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ಗಣತಿದಾರರು ಬಂದಾಗ ತುಳುವರು ತಮ್ಮ ಮಾತೃ ಭಾಷೆ ‘ತುಳು’ ಎಂದು ನೋಂದಾಯಿಸಬೇಕು ಎಂದ ಅವರು ಇದರಿಂದ ತುಳುವರಿಗೆ ಸಂವಿಧಾನಾತ್ಮಕವಾಗಿ ವಿಶೇಷ ಸೌಲಭ್ಯ-ಸವಲತ್ತು ಪಡೆಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹೇಮಾವತಿ ವಿ. ಹೆಗ್ಗಡೆ ಇದ್ದರು.